ಜಮೀರ್ ಕ್ಷೇತ್ರಕ್ಕೆ 200 ಕೋಟಿ ಶಿಫಾರಸು- ಸಿಎಂ ಸಮರ್ಥಿಸಿಕೊಂಡ ಸಿದ್ದು

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂ. ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಶಿಫಾರಸು ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜಮೀರ್ ಪತ್ರ ಬರೆದು ಕ್ಷೇತ್ರಕ್ಕೆ 200 ಕೋಟಿ ರೂ. ಕೇಳಿದ್ದಾರೆ. ಅದಕ್ಕೆ ಸಿಎಂ ಬಿಎಸ್‍ವೈ ಕೇವಲ ಛೋಟಾ ಸಹಿ ಹಾಕಿ ಫೈನಾನ್ಸ್ ಡಿಪಾರ್ಟ್‍ಮೆಂಟ್‍ಗೆ ಮೂವ್ ಮಾಡಿದ್ದಾರೆ. ಒಂದುವೇಳೆ ಹಣ ಬಿಡುಗಡೆಯಾಗಿದ್ದರೆ ಹೌದಪ್ಪ ಅನ್ನಬಹುದಿತ್ತು. ಆದರೆ ಯತ್ನಾಳ್ ತರದವರು ಸುಮ್ಮನೆ ಏನೇನೋ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಚಿವ ಯೋಗೇಶ್ವರ್ ಹಣ ಖರ್ಚು ಮಾಡಿರೋ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲಕ್ಕೆ ಹಣ ಖರ್ಚು ಮಾಡಿದ್ದರೆ ಸೂಕ್ತ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಅಲ್ಲದೆ ಸಿಡಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಬಿಜೆಪಿ ಹಿರಿಯ ನಾಯಕ, ಯಡಿಯೂರಪ್ಪನವರ ಕೊಳಕು ಸಿಡಿ ಇದೆ ಎಂದು ಅವರೇ ಬಾಯಿ ಬಿಟ್ಟು ಹೆಳುತ್ತಿದ್ದಾರೆ. ಹೀಗಾಗಿ ಏನು ಸಿಡಿ ಎಂದು ತನಿಖೆ ಮೂಲಕ ಬಹಿರಂಗವಾಗಲಿ ಎಂದಿದ್ದಾರೆ.

ಕೊರೊನಾ ಲಸಿಕೆ ವಿತರಣೆ ಆರಂಭವಾಗಿದೆ. ಶಾಸಕರಿಗೆ ಕೊರೊನಾ ಲಸಿಕೆ ಹಾಕಲು ಇನ್ನೂ ಅನುಮತಿ ನೀಡಿಲ್ಲ. ಹಾಕುವ ಸಮಯ ಬಂದಾಗ ಹಾಕ್ತಾರೆ. ಇವಾಗ ಕೊರೊನಾ ವಾರಿಯರ್ಸ್ ಗೆ ಹಾಕುತ್ತಿದ್ದಾರೆ. ಎಲ್ಲ ಜನರಿಗೆ ಲಸಿಕೆ ಹಾಕಲೇಬೇಕು. ಅದರ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *