ಜಮೀನು ವಿವಾದದಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯ ಕೊಲೆ – ನಾಲ್ವರು ಪೊಲೀಸರ ವಶಕ್ಕೆ

ಚಿಕ್ಕಬಳ್ಳಾಪುರ: ಜಮೀನು ವಿವಾದ ಹಾಗೂ ಹಳೇ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತಿ ಕಾರ್ಯದರ್ಶಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಅವುಲನಾಗೇನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ನಗರ ಯಲಹಂಕ ತಾಲೂಕು ಬಂಡಿಕೊಡಿಗೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯ ಹಾಗೂ ಅವುಲನಾಗೇನಗಳ್ಳಿ ಗ್ರಾಮದ ರಾಮಾಂಜಿನಪ್ಪ(40) ಕೊಲೆಯಾದ ದುರ್ದೈವಿ.

ರಾಮಾಂಜಿನಪ್ಪ ಹಾಗೂ ಇದೇ ಗ್ರಾಮದ ಗರಿಗ ವೆಂಕಟರೆಡ್ಡಿ ಕುಟುಂಬಸ್ಥರ ನಡುವೆ ಹಳೆ ದ್ವೇಷ ಸೇರಿದಂತೆ ಹಲವು ವರ್ಷಗಳಿಂದ ಜಮೀನು ವಿವಾದವಿದ್ದು, ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೇ ಹಳೆ ದ್ವೇಷದ ಹಿನ್ನೆಲೆ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಜಮೀನು ಬಳಿ ಇದ್ದ ರಾಮಾಂಜಿನಪ್ಪ ಹಾಗೂ ಪತ್ನಿ ಮಂಜುಳಮ್ಮ ಮೇಲೆ ಗರಿಗ ವೆಂಕಟರೆಡ್ಡಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ.

ರಾಮಾಂಜಿನಪ್ಪ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಅಡ್ಡ ಹೋದ ಪತ್ನಿ ಮಂಜುಳಮ್ಮ ಕೈ ಬೆರಳುಗಳು ಕಟ್ ಆಗಿವೆ. ಈ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು, ಇದೀಗ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ಗಾಯಾಳು ಮಂಜುಳಮ್ಮಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತೆಗ್ರೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಗಾಯಾಳು ಪತ್ನಿ ಮಂಜುಳಮ್ಮ ಆರೋಪಿಗಳ ಹೆಸರು ಹೇಳಿದ್ದು, ಅವರನ್ನು ಬಂಧಿಸುವುದಾಗಿ ತಿಳಿಸಿದರು. ಈ ಸಂಬಂಧ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *