ಚೇಸ್ ಮಾಡಿ, ಕಾರು ಅಡ್ಡ ಹಾಕಿದಾಗ ಪೊಲೀಸರ ಮೇಲೆ ತಲವಾರು ಬೀಸಿದ ಕೊಲೆ ಆರೋಪಿ

– ಗುಂಡ್ಯದಲ್ಲಿ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಮಂಗಳೂರು: ರೌಡಿಶೀಟರ್ ಚೆನ್ನೈ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗುಂಡ್ಯ ಬಳಿ ಈ ಘಟನೆ ನಡೆದಿದೆ. ಶುಕ್ರವಾರ ಬಂಟ್ವಾಳದ ಮೆಲ್ಕಾರ್ ಬಳಿ ಉಮಾರ್ ಫಾರೂಕ್ ಕೊಲೆ ನಡೆದಿತ್ತು. ಈ ಪ್ರಕರಣದ ಆರೋಪಿ ಖಲೀಲ್ ಮತ್ತು ತಂಡ ಕಾರಿನಲ್ಲಿ ತೆರಳುತ್ತಿತ್ತು. ಇದರ ನಿಖರ ಮಾಹಿತಿ ಪಡೆದ ಪೊಲೀಸರು ಆರೋಪಿ ಖಲೀಲ್ ಮತ್ತು ತಂಡವನ್ನು ಬಂಟ್ವಾಳ ಪಿಎಸ್‍ಐಗಳಾದ ಅವಿನಾಶ್ ಮತ್ತು ಪ್ರಸನ್ನ ಟೀಂ ಚೇಸ್ ಮಾಡಿತ್ತು.

ಕಾರು ಅಡ್ಡ ಹಾಕಿದಾಗ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ಬೀಸಿದ್ದಾನೆ. ತಲವಾರು ಬೀಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಎಸ್‍ಐ ಅವಿನಾಶ್, ಖಲೀಲ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಸ್‍ಐ ಪ್ರಸನ್ನಗೆ ಸಣ್ಣ ಗಾಯಗಳಾಗಿದೆ. ಈ ವೇಳೆ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿ ಖಲೀಲ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಿನ್ನೆ ಸಂಜೆ ವೈಯಕ್ತಿಕ ದ್ವೇಷದಿಂದ ಮಾರಕಾಯುಧಗಳಿಂದ ದಾಳಿ ಮಾಡಿ ರೌಡಿ ಶೀಟರ್ ಫಾರೂಕ್ ಹತ್ಯೆ ಮಾಡಲಾಗಿತ್ತು. ಕಾರಲ್ಲಿ ಬಂದ ದುಷ್ಕರ್ಮಿಗಳು ಫಾರೂಕ್ ನನ್ನು ತಲವಾರಿನಿಂದ ಹಿಗ್ಗಾಮುಗ್ಗ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದರು. ಘಟನೆ ನಡೆದ ಕೂಡಲೇ ಫಾರೂಕ್ ನನ್ನು ಪೊಲೀಸ್ ಜೀಪ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments

Leave a Reply

Your email address will not be published. Required fields are marked *