ಚಿರುವಿನ ಮೂರನೇ ದಿನದ ಹಾಲು ತುಪ್ಪ ಕಾರ್ಯ

ಬೆಂಗಳೂರು: ಯುವ ನಟ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಂದು ಚಿರು ಸರ್ಜಾ ಅವರ ಮೂರನೇ ದಿನದ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ.

ಕನಕಪುರ ನೆಲಗುಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿ ಬಳಿ ಪುರೋಹಿತರಿಂದ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ. ಸೋಮವಾರ ಸಂಜೆ 6 ಗಂಟೆ ಹೊತ್ತಿಗೆ ಹಿಂದೂ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಿತ್ತು. ಅಂತ್ಯಕ್ರಿಯೆ ವಿಧಿವಿಧಾನ ನಡೆಸಿಕೊಟ್ಟ ಮೋಹನ್ ಪುರೋಹಿತರಿಂದಲೇ ಇಂದು ಚಿರುವಿನ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ.

ಇಂದು ಬೆಳಗ್ಗೆಯೇ ಸರ್ಜಾ ಕುಟುಂಬ ಮತ್ತು ಮೇಘನಾ ರಾಜ್ ಕುಟುಂಬದವರು ಕೆ.ಆರ್ ರಸ್ತೆಯಲ್ಲಿರುವ ನಿವಾಸದಿಂದ ಬೃಂದಾವನ ಫಾರ್ಮ್ ಹೌಸ್‍ಗೆ ಹೋಗಿದ್ದರು. ಚಿರು ಹಾಲು ತುಪ್ಪ ಕಾರ್ಯದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲ ಆಪ್ತರು ಮಾತ್ರ ಪಾಲ್ಗೊಂಡಿದ್ದಾರೆ.

ಭಾನುವಾರ ಮಧ್ಯಾಹ್ನದ ವೇಳೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿತ್ತು. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದರು.

 

‘ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಸೋಮವಾರ ಅಂತ್ಯಕ್ರಿಯೆ ನಡೆದಿದೆ.

Comments

Leave a Reply

Your email address will not be published. Required fields are marked *