ಚಿಕ್ಕಬಳ್ಳಾಪುರದಲ್ಲಿ ನಗರಸಭೆ ಚುನಾವಣೆ – ಅಪರೇಷನ್ ಕಮಲ ಸಕ್ಸಸ್

– ಅಧ್ಯಕ್ಷರಾಗಿ ಸುಧಾಕರ್ ಬೆಂಬಲಿಗ ಆನಂದ್ ರೆಡ್ಡಿ ಆಯ್ಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ನೂತನ ಅಧ್ಯಕ್ಷರಾಗಿ ಸಚಿವ ಸುಧಾಕರ್ ಬೆಂಬಲಿಗ ಆನಂದ್ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‍ನ ವೀಣಾರಾಮು ಆಯ್ಕೆಯಾಗಿದ್ದು, ಸಚಿವ ಸುಧಾಕರ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಂದ್ ರೆಡ್ಡಿಯನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಚಿವ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುವಂತೆ ಮಾಡಿದ್ದಾರೆ.

ಅಂದಹಾಗೆ 31 ಮಂದಿ ಸಂಖ್ಯಾ ಬಲದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 16 ಮಂದಿ ಕಾಂಗ್ರೆಸ್ ಸದಸ್ಯರಿದ್ದು, 9 ಮಂದಿ ಬಿಜೆಪಿ ಹಾಗೂ 4 ಪಕ್ಷೇತರರು ಸೇರಿ ಇಬ್ಬರು ಜೆಡಿಎಸ್ ಸದಸ್ಯರಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯರೇ ಅಧ್ಯಕ್ಷರಾಗುವ ತಯಾರಿಯಲ್ಲಿದ್ದರು. ಆದರೆ ಅದೆಲ್ಲದ್ದಕ್ಕೂ ಪುಲ್ ಸ್ಟಾಪ್ ಇಟ್ಟಿರೋ ಕ್ಷೇತ್ರದ ಸಚಿವ ಸುಧಾಕರ್ 7 ಮಂದಿ ಕಾಂಗ್ರೆಸ್ ಸದಸ್ಯರನ್ನೇ ತಮ್ಮತ್ತ ಸೆಳೆದುಕೊಳ್ಳುವ ಮೂಲಕ ತಮ್ಮ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಂದ್ ರೆಡ್ಡಿ ಬಾಬು ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ 9 ಮಂದಿ ಸದಸ್ಯರಿದ್ದರೂ 7 ಮಂದಿ ಸದಸ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸಚಿವ ಸುಧಾಕರ್, ಅಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್ಸಿನಿಂದ ಅಧ್ಯಕ್ಷ ಸ್ಥಾನಕ್ಕೆ ಅಂಬಿಕಾರವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರದ್ದೇ ಪಕ್ಷದ ಸದಸ್ಯರಾದ ರಫೀಕ್, ಮೀನಾಕ್ಷಿ, ಚಂದ್ರ ಹಾಗೂ ಅಫ್ಜಲ್ ಪಕ್ಷದ ವಿರುದ್ಧ ಮತ ಚಲಾಯಿಸಿದ್ರೇ, ಕಾಂಗ್ರೆಸ್ಸಿನ ಉಳಿದ ಮೂವರು ಸದಸ್ಯರಾದ ಸ್ವಾತಿ, ರತ್ನಮ್ಮ ಹಾಗೂ ಶಕೀಲಾಭಾನು ಚುನಾವಣೆಗೆ ಗೈರು ಹಾಜರಾಗಿದ್ದರು.

ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಕೇವಲ 9 ಮತ ಬಂದಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಅನಂದ್ ರೆಡ್ಡಿ ಬಾಬುಗೆ ಬಿಜೆಪಿಯ 9 ಹಾಗೂ ಜೆಡಿಎಸ್‍ನ ಇಬ್ಬರು, ನಾಲ್ವರು ಪಕ್ಷೇತರರರು ಸೇರಿದಂತೆ 04 ಕಾಂಗ್ರೆಸ್ ಮತಗಳು ಹಾಗೂ ಶಾಸಕ ಸುಧಾಕರ್, ಸಂಸದ ಬಿಎನ್ ಬಚ್ಚೇಗೌಡ, ಹಾಗೂ ವಿಧಾನಪರಿಷತ್ ಸದಸ್ಯ ವೈಎ ನಾರಾಯಣಸ್ವಾಮಿ ಮತಗಳು ಬಿದ್ದಿದ್ದು ಒಟ್ಟು 22 ಮತಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ವೀಣಾರಾಮು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *