ಚಿಕಿತ್ಸೆಗೆ ಅಲೆದಾಡಿ ಮಧ್ಯರಾತ್ರಿ ಗಾಂಧಿ ಪ್ರತಿಮೆಯೆದುರು ಕೂತ ವೃದ್ಧ ದಂಪತಿ- ಸುಧಾಕರ್ ಸ್ಪಂದನೆ

– ಪಬ್ಲಿಕ್ ಟಿವಿ ನೆರವಿನಿಂದ ವೃದ್ಧ ದಂಪತಿ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು: ಆಸ್ಪತ್ರೆಗಳನ್ನು ಸುತ್ತಿದರೂ ಮಧ್ಯರಾತ್ರಿಯಲ್ಲಿ ಬೆಡ್ ಇಲ್ಲದೆ ವೃದ್ಧ ದಂಪತಿ ಮತ್ತು ಮಗಳು ಪರಾಡುತ್ತಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ತಕ್ಷಣ ಎಚ್ಚೆತ್ತ ಸಚಿವ ಸುಧಾಕರ್ ವೃದ್ಧ ದಂಪತಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ.

ವೃದ್ಧ ದಂಪತಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಆದರೆ ಯಾವುದೇ ಆಸ್ಪತ್ರೆ ಬೆಡ್ ಇಲ್ಲ ಯಾರೂ ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಕೊನೆಗೆ ಆಸ್ಪತ್ರೆ ಸಿಗದೆ ಅಲೆದಿದ್ದ ವೃದ್ಧ ದಂಪತಿ ಮತ್ತು ಮಗಳು ಮಧ್ಯರಾತ್ರಿ ಕಬ್ಬನ್ ಪಾರ್ಕ್ ಗಾಂಧಿ ಪ್ರತಿಮೆ ಎದುರು ಕುಳಿತಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿತ್ತು.

ಆಸ್ಪತ್ರೆಗೆ ದಾಖಲಿಸದೆ ನಾವು ಮಲಗಲ್ಲ ಅಂತ ಮಗಳು ಸ್ಪಷ್ಟಪಡಿಸಿದ್ದರು. ಪಬ್ಲಿಕ್ ಟಿವಿ ವರದಿ ಬೆನ್ನೆಲ್ಲೇ ಸಚಿವ ಡಾ.ಸುಧಾಕರ್ ಸ್ಪಂದನೆ ನೀಡಿದ್ದಾರೆ. ಕೊನೆಗೆ ಸಚಿವ ಸಧಾಕರ್ ವೃದ್ಧ ದಂಪತಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಸುಧಾಕರ್ ಟ್ವೀಟ್ ಮಾಡಿದ್ದು, “ಕಬ್ಬನ್ ಪಾರ್ಕ್ ಬಳಿ ಕಗ್ಗತ್ತಿಲಿನಲ್ಲಿ ವ್ಯಥೆ ಪಡುತ್ತಿದ್ದ ದಂಪತಿಗಳ ಪುತ್ರಿಯೊಂದಿಗೆ ಮಾತನಾಡಿದ್ದೇನೆ. ಅವರನ್ನು ಈ ಕೂಡಲೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಯೊಬ್ಬರಿಗೆ ಸೂಚಿಸಿದ್ದೇನೆ. ಅವರು ಕ್ಷೇಮವಾಗಿ ಆಸ್ಪತ್ರೆ ಸೇರುವವರೆಗೂ ನಾನು ಮಲಗುವುದಿಲ್ಲ. ಇದನ್ನು ನನ್ನ ಗಮನಕ್ಕೆ ತಂದ ಪಬ್ಲಿಕ್ ಟಿವಿಗೆ ಧನ್ಯವಾದಗಳು” ಎಂದು ಮೊದಲಿಗೆ ಹೇಳಿದ್ದರು.

ನಂತರ ಮತ್ತೊಂದು ಟ್ವೀಟ್ ಮಾಡಿ, “ವೃದ್ಧ ದಂಪತಿಯನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಬ್ಲಿಕ್ ಟಿವಿಗೆ ಹಾಗೂ ಅಧಿಕಾರಿ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೀನಿ” ಎಂದಿದ್ದಾರೆ.

Comments

Leave a Reply

Your email address will not be published. Required fields are marked *