ಚಾರ್ಮಾಡಿ ಸಂಚಾರ ಬಂದ್- ಕೊಟ್ಟಿಗೆಹಾರದಲ್ಲಿಯೇ ಜನ ಲಾಕ್

ಚಿಕ್ಕಮಗಳೂರು: ಮಲೆನಾಡಲ್ಲಿ ಯಥೇಚ್ಛವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಚಾರ್ಮಾಡಿಯಲ್ಲಿ ಯಾವುದೇ ಅನಾಹುತ ಸಂಭವಿಸಬಾರದು ಎಂದು ಜಿಲ್ಲಾಡಳಿತ ಮುಂಜಾಗೃತಾ ಕ್ರಮವಾಗಿ ರಾತ್ರಿ ವೇಳೆ ಚಾರ್ಮಾಡಿ ಸಂಚಾರವನ್ನ ಬಂದ್ ಮಾಡಿದೆ.

ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಚಾರ್ಮಾಡಿಯಲ್ಲಿ ಯಾವುದೇ ವಾಹನ ಸಂಚಾರ ಮಾಡುವಂತಿಲ್ಲ. ಶುಕ್ರವಾರ ಸಂಜೆಯೇ ಬಂದ್ ಮಾಡಿದ್ದ ಜಿಲ್ಲಾಡಳಿತದ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದರು. ಏಕಾಏಕಿ ಹೀಗೆ ಬಂದ್ ಮಾಡಿದರೆ ನಾವು ದೂರದಿಂದ ಬಂದಿದ್ದೇವೆ ಏನ್ ಮಾಡೋದು ಎಂದು ಜಿಲ್ಲಾಡಳಿತಕ್ಕೆ ಪ್ರಶ್ನಿಸಿದ್ದರು. ನಂತರ ಜಿಲ್ಲಾಡಳಿತ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 10 ಗಂಟೆವರೆಗೂ ಚಾರ್ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು.

ಶನಿವಾರ ರಾತ್ರಿ ಸಂಚಾರಕ್ಕೆ ಯಾವುದೇ ಅನುಮತಿ ಇರಲಿಲ್ಲ. ಆದರೂ ನೂರಾರು ವಾಹನಗಳು ಕೊಟ್ಟಿಗೆಹಾರಕ್ಕೆ ಬಂದು ಲಾಕ್ ಆಗಿವೆ. ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಬೇಕು. ಮಂಗಳೂರು ಆಸ್ಪತ್ರೆಗೆ ಹೋಗಬೇಕು, ಟಿವಿ ನೋಡಿಲ್ಲ. ಹೋಂ ಸ್ಟೇಗೆ ಹೋಗಿದ್ವಿ ಎಂದು ಹಲವು ಕಾರಣಗಳನ್ನ ಹೇಳಿಕೊಂಡು ಚಾರ್ಮಾಡಿಗೆ ಬಂದಿದ್ದಾರೆ. ಮತ್ತೆ ಕೆಲವರು 7.30ಕ್ಕೆ ಬಂದು ಅರ್ಧ ಗಂಟೆ ಅಷ್ಟೆ ಹೋಗಿಬಿಡುತ್ತೇವೆ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡಿಲ್ಲ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ಬಂದ್

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಸುಮಾರು 150ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿವೆ. ಚಾರ್ಮಾಡಿಯಲ್ಲಿ ಉಳಿಯಲು ಲಾಡ್ಜ್ ವ್ಯವಸ್ಥೆ ಇಲ್ಲ. ಲಾಡ್ಜ್ ಬೇಕು ಅಂದ್ರೆ 25 ಕಿ.ಮೀ. ವಾಪಸ್ ಬಂದು ಮೂಡಿಗೆರೆಯಲ್ಲಿ ಉಳಿಯಬೇಕು. ಹಾಗಾಗಿ ಬಹುತೇಕರು ಸಿಕ್ಕಲ್ಲಿ ಕಾರನ್ನ ಸೈಡಿಗೆ ಹಾಕಿ ಕಾರಲ್ಲೇ ನಿದ್ದೆಗೆ ಜಾರಿದ್ದಾರೆ. ಬೆಳಗ್ಗೆ 6 ಗಂಟೆಗೆ ಚಾರ್ಮಾಡಿ ಮೂಲಕ ಹೊರಡಲಿದ್ದಾರೆ. ಆದರೆ ಕೆಲವರು ಗೊತ್ತಿದ್ದು ಹೋಗಿಬಿಡೋಣ ಎಂದು ಬಂದು ಬೀದಿಯಲ್ಲಿ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಚಾರ್ಮಾಡಿಯಲ್ಲಿ ಎಲ್ಲೆಂದರಲ್ಲಿ ಪ್ರವಾಸಿಗರ ಡ್ಯಾನ್ಸ್- ವಾಹನ ಸವಾರರಿಗೆ ಕಿರಿಕಿರಿ

Comments

Leave a Reply

Your email address will not be published. Required fields are marked *