ಚಾರ್ಮಾಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕೊಟ್ಟಿಗೆಹಾರ ಬಂದ್

ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರ ಮೂಲಕ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕೊಟ್ಟಿಗೆಹಾರ ಬಂದ್ ಮಾಡಲಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ವರ್ತಕರ ಸಂಘ ಹಾಗೂ ಗೆಳೆಯರ ಬಳಗ ಕೊಟ್ಟಿಗೆಹಾರ ಬಂದ್ ಮಾಡಿ ಚಾರ್ಮಾಡಿ ಘಾಟಿಯಲ್ಲಿ ಪಾದಯಾತ್ರೆ ನಡೆಸಿ ಚಾರ್ಮಾಡಿ ಉಳಿವಿಗೆ ಆಗ್ರಹಿಸಿದ್ದಾರೆ. ಮಲೆನಾಡಿನ ಜನ ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯಕ್ಕಾಗಿ ಚಾರ್ಮಾಡಿ ಘಾಟಿಯನ್ನೆ ಆಶ್ರಯಿಸಿಕೊಂಡಿದ್ದಾರೆ. ಆದರೆ ಪ್ರತಿ ವರ್ಷದ ಮಳೆಯಿಂದ ಚಾರ್ಮಾಡಿ ಘಾಟ್ ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಮೂಲ ಕಾರಣ ಸರ್ಕಾರ ಚಾರ್ಮಾಡಿ ಘಾಟಿಯನ್ನು ಸಮರ್ಪಕ ರೀತಿಯಲ್ಲಿ ದುರಸ್ತಿ ಮಾಡದಿರುವುದು ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿ ಮಳೆಗಾಲದಲ್ಲೂ ಈ ಮಾರ್ಗ ಬಂದ್ ಮಾಡುತ್ತಾರೆ. ಇದರಿಂದ ಹಲವರಿಗೆ ನಾನಾ ರೀತಿಯ ತೊಂದರೆಯಾಗಲಿದೆ. ಸರ್ಕಾರ ಚಾರ್ಮಾಡಿಗೆ ಪರ್ಯಾಯ ರಸ್ತೆಯಾಗಿ ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ನ್ಯಾಯಾಲಯ ಈ ರಸ್ತೆ ಕಾಮಾಗಾರಿಗೆ ತಡೆಯೊಡ್ಡಿರುವುದರಿಂದ ಕೂಡಲೇ ಚಾರ್ಮಾಡಿ ರಸ್ತೆಯನ್ನು ದುರಸ್ತಿಗೊಳಿಸಿ, ಉಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಮಾರ್ಗ ನೂರಾರು ರೀತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಕೂಡಲೇ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ, ಉಳಿಸಬೇಕೆಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *