ಚಾಮುಂಡಿ ಬೆಟ್ಟಕ್ಕೆ ಡಿ ಬಾಸ್ ಭೇಟಿ- ಮುಗಿಬಿದ್ದ ಅಭಿಮಾನಿಗಳು

ಮೈಸೂರು: ನಟ ದರ್ಶನ್ ವಿಶೇಷ ಸಂದರ್ಭಗಳಲ್ಲಿ ಹಾಗೂ ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುತ್ತಿರುತ್ತಾರೆ. ಅದೇ ರೀತಿ ಇಂದು ಸಹ ದಿಢೀರ್ ಭೇಟಿ ನೀಡಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಟ ದರ್ಶನ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಿದರು. ನಟ ಚಿಕ್ಕಣ್ಣ ಹಾಗೂ ಮೈಸೂರಿನ ಗೆಳೆಯರ ಜೊತೆ ದರ್ಶನ್ ಬೆಟ್ಟಕ್ಕೆ ಆಗಮಿಸಿದ್ದರು. ದೇವಿಗೆ ಪೂಜೆ ಸಲ್ಲಿಸಿ ಬಳಿಕ ತೆರಳಿದರು. ಇದ್ದಕ್ಕಿಂತೆ ಡಿ ಬಾಸ್ ಪ್ರತ್ಯಕ್ಷವಾಗಿದ್ದನ್ನು ಕಂಡ ಅವರ ಅಭಿಮಾನಿಗಳು ಸುತ್ತುವರಿದರು. ಯಜಮಾನನ್ನು ನೋಡಲು ಮುಗಿಬಿದ್ದರು.

ಡಿ ಬಾಸ್ ಸುತ್ತುವರಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ದರ್ಶನ್ ಸ್ನೇಹಿತರೊಂದಿಗೆ ದೇವಿಯ ದರ್ಶನ ಪಡೆದು ಮರಳಿದರು. ದರ್ಶನ್ ಇಂದು ಚಾಮುಂಡಿ ಬೆಟ್ಟಕ್ಕೆ ಯಾಕೆ ಭೇಟಿ ನೀಡಿದ್ದರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಅಲ್ಲದೆ ಸಾರಥಿ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ ಪೂರೈಸಿದ್ದು, ಈ ಹಿನ್ನೆಲೆ ಭೇಟಿ ನೀಡಿದ್ದರಾ ಎಂದು ಅಭಿಮಾನಿಗಳು ಕೇಳುತ್ತಿದ್ದರು.

ಸಾರಥಿ ಸಿನಿಮಾ ಬಿಡುಗಡೆಯಾಗಿ 9 ವರ್ಷ ಪೂರೈಸಿದೆ. ಹೀಗಾಗಿ ಸೆಪ್ಟೆಂಬರ್ 30 ಡಿ ಬಾಸ್ ಸಿನಿಮಾ ಕರೀಯರ್‍ನ ವಿಶೇಷ ದಿನ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಸಿನಿಮಾದಿಂದಾಗಿಯೇ ಡಿ ಬಾಸ್ ಮತ್ತೆ ಪುಟಿದೇಳುವಂತಾಯಿತು ಎಂಬುದು ಸಿನಿ ರಸಿಕರ ಮಾತು. ನವಗ್ರಹ ಸಿನಿಮಾ ಬಳಿಕ ಡಿ ಬಾಸ್‍ಗೆ ತಮ್ಮ ಸಿನಿಮಾ ಕರೀಯರ್‍ನಲ್ಲಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ‘ಸಾರಥಿ’. ಈ ಮೂಲಕ ಯಜಮಾನ ಅತಿ ದೊಡ್ಡ ಯಶಸ್ಸು ಕಂಡಿದ್ದರು. ಹೀಗಾಗಿ ಸಾರಥಿ ಸಿನಿಮಾ ಬಿಡುಗಡೆಯಾದ ಸೆಪ್ಟೆಂಬರ್ 30ರ ದಿನವನ್ನು ಅಭಿಮಾನಿಗಳು ಸಂಭ್ರದಿಂದ ಆಚರಿಸುತ್ತಾರೆ. ಡಿ ಬಾಸ್ ಸಹ ಈ ದಿನವನ್ನು ಅಷ್ಟೇ ವಿಶೇಷವಾಗಿ ನೋಡುತ್ತಾರೆ.

‘ಸಾರಥಿ’ಗೆ 9 ವರ್ಷ ತುಂಬಿರುವುದರಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಸಾರಥಿ’ ಸಿನಿಮಾ ಕುರಿತು ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಆ ದಿನಗಳನ್ನು ನೆನೆಯುತ್ತಿದ್ದಾರೆ. ಟ್ವಿಟ್ಟರಿನಲ್ಲಿ ಸಹ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಡಿ ಬಾಸ್ ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗುತ್ತಿದೆ.

https://www.youtube.com/watch?v=pPQ5-wf7YdI

Comments

Leave a Reply

Your email address will not be published. Required fields are marked *