ಚಾಮರಾಜನಗರದಲ್ಲಿ ಮತ್ತೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಸ್ಥಾಪನೆ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಂತರ್ ಜಿಲ್ಲಾ ಚೆಕ್‍ಪೋಸ್ಟ್ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಅಲ್ಲದೆ ಲಾರಿಯಲ್ಲಿ ವಸ್ತು ಬದಲು ಪ್ರಯಾಣಿಕರನ್ನು ಕರೆತರುತ್ತಿದ್ದಾರೆ. ಹೀಗಾಗಿ ಲಾರಿಯಲ್ಲಿ ಡ್ರೈವರ್ ಹಾಗೂ ಕ್ಲೀನರ್ ಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿ ಕೊರತೆಯಿದೆ. ಈ ಕುರಿತು ಆರೋಗ್ಯ ಸಚಿವರ ಗಮನಕ್ಕೆ ತರುತ್ತೇವೆ. ಜಿಲ್ಲಾ ಖನಿಜ ನಿಧಿಯಿಂದ 3.30 ಕೋಟಿ ರೂ.ಗಳನ್ನು ಬಳಸಿಕೊಳ್ಳುತ್ತೇವೆ. ಜೆಎಸ್‍ಎಸ್ ಆಸ್ಪತ್ರೆ ಜೊತೆ ಸರ್ಕಾರದ ಒಡಂಬಡಿಕೆ ಮಾಡಿಕೊಳ್ಳುತ್ತೇವೆ ಇದರಿಂದ ಚಿಕಿತ್ಸೆಗೆ ಹೆಚ್ಚು ಬೆಡ್ ಸೌಲಭ್ಯ ಸಿಗುತ್ತೆ ಎಂದರು.

ರಾಜ್ಯದಲ್ಲಿ 8.48 ಲಕ್ಷ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈಗಾಗಲೇ ಇಂಗ್ಲಿಷ್ ಹಾಗೂ ಗಣಿತ ಪರೀಕ್ಷೆ ಕೂಡ ಮುಗಿದಿದೆ. ಮೂರ್ನಾಲ್ಕು ಕಡೆ ಕೊರೊನಾ ವರದಿಯಾಗಿದೆ. ಆದರೆ ಪರೀಕ್ಷಾ ಕೇಂದ್ರದಿಂದ ಯಾರಿಗೂ ಕೊರೊನಾ ಹರಡಿಲ್ಲ. ಹಾಸನದ ವಿದ್ಯಾರ್ಥಿಗೆ ಡೆಂಘೀ ಜ್ವರ ಇತ್ತು. ಅಲ್ಲದೆ ನೆನ್ನೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಅದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 19 ಮಕ್ಕಳ ಸ್ಯಾಂಪಲ್ ನೆಗೆಟಿವ್ ಬಂದಿದೆ. ಎಕ್ಸ್ ಪರ್ಟ್ ಕಮಿಟಿಯ ಮಾರ್ಗದರ್ಶನದಂತೆ ಪರೀಕ್ಷೆ ನಡೆಸಿದ್ದೇವೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ನಾವು ಸಹ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದೇವೆ. ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಮುಂದೆಯೂ ಕೂಡ ಸುರಕ್ಷತೆಯಿಂದ ಪರೀಕ್ಷೆ ನಡೆಸುತ್ತೇವೆ ಎಂದರು.

Comments

Leave a Reply

Your email address will not be published. Required fields are marked *