ಗ್ರೀನ್‍ಝೋನ್‍ನಲ್ಲಿದ್ದ ರಾಮನಗರಕ್ಕೂ ಆವರಿಸಿದ ಕೊರೊನಾ- ಇಬ್ಬರಲ್ಲಿ ಸೋಂಕು ಪತ್ತೆ?

ರಾಮನಗರ: ಗ್ರೀನ್ ಝೋನ್ ನಲ್ಲಿದ್ದ ರಾಮನಗರಕ್ಕೂ ಕೊರೊನಾ ಮಹಾಮಾರಿ ಎಂಟ್ರಿ ಕೊಟ್ಟಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಕೆಎಸ್‍ಆರ್ ಟಿಸಿ ಡ್ರೈವರ್ ಸೇರಿದಂತೆ ಮಗುವಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ತುಮಕೂರಿನ ಬೆಳ್ಳಾವಿ ಮೂಲದ ಮಾಗಡಿ ಕೆಎಸ್‍ಆರ್‍ಟಿಸಿ ಡಿಪೋದ ಡ್ರೈವರ್ ಗೆ ಕೊರೊನಾ ಧೃಢವಾಗಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಚಾಲಕ ಕಳೆದ ಐದು ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು. ಕೊರೊನಾ ವರದಿ ಬರುವ ಮುನ್ನವೇ ಡಿಪೋ ಮ್ಯಾನೇಜರ್ ಚಾಲಕನಿಗೆ ಡ್ಯೂಟಿ ನೀಡಿದ್ದ. ಹೀಗಾಗಿ ಮೂರು ದಿನ ಮಾಗಡಿ-ಬೆಂಗಳೂರು ಲೈನ್ ಡ್ಯೂಟಿ ಮಾಡಿದ್ದ. ಮಾಗಡಿಯ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ತನ್ನ ಸಹ ಸಿಬ್ಬಂದಿ ಜೊತೆ ಊಟ-ತಿಂಡಿ ಕೂಡ ಸೇವಿಸಿದ್ದ. ಇದೀಗ ಮಾಗಡಿ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಆತಂಕ ಶುರುವಾಗಿದೆ. ಕೊರೊನಾ ಶಂಕಿತ ಚಲಾಯಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮೇಲೂ ನಿಗಾ ಇರಿಸಲಾಗಿದೆ.

ಇತ್ತ ಮಾಗಡಿಯಲ್ಲಿ ಮಗುವಿಗೂ ಕೊರೊನಾ ಧೃಢವಾಗಿದೆ. ಕುದೂರು ಬಳಿಯ ಮಾರಸಂದ್ರ ಗ್ರಾಮದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಎರಡೂವರೆ ವರ್ಷದ ಮಗು ವಶಕ್ಕೆ ಪಡೆದಿದ್ದಾರೆ. ಕೊರೊನಾ ಸೋಂಕಿತ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಮಾಗಡಿ ತಾಲೂಕ್ ಸುಗ್ಗನಹಳ್ಳಿ ಬಳಿಯ ಮಾರಸಂದ್ರ ಗ್ರಾಮದ ಮಗುವಿನ ಕುಟುಂಬ ತಮಿಳುನಾಡಿನ ಚೆನ್ನೈನಿಂದ ಬಂದಿದ್ದು, ಕ್ವಾರಂಟೈನ್ ಮಾಡಲಾಗಿತ್ತು. ಈ ಗ್ರಾಮದಲ್ಲಿ 80 ಮನೆಗಳಿವೆ. ಹೀಗಾಗಿ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಡಳಿತದಿಂದ ಸ್ಪಷ್ಟನೆಯೊಂದೆ ಬಾಕಿ ಇದೆ.

Comments

Leave a Reply

Your email address will not be published. Required fields are marked *