ಗ್ರಾ.ಪಂ. ಎಲೆಕ್ಷನ್- ರಾತ್ರಿ ಗ್ರಾಮದ ಪ್ರತಿ ಮನೆಗೆ ಕುಂಕುಮ ಎರಚಿದ್ರು

ವಿಜಯಪುರ: ಜಿಲ್ಲೆಯಲ್ಲಿ 111 ಗ್ರಾಮ ಪಂಚಾಯತಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಇದರ ಬೆನ್ನಲ್ಲೆ ಗ್ರಾಮ ಚುನಾವಣೆಗೆ ವಾಮಾಚಾರದ ಬಿಸಿ ತಟ್ಟಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ವಾರ್ಡ್ ನಂಬರ್ 2ರ ಮನೆಮನೆಗೆ ಕಿಡಗೇಡಿಗಳು ಕುಂಕುಮ ಎರಚಿದ್ದಾರೆ. ನಾಳೆ ಮತದಾನ ನಡೆಯಲಿದ್ದು ಗ್ರಾಮದಲ್ಲಿ ವಾಮಾಚಾರದ ಶಂಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

ಹಡಲಗೇರಿ ಗ್ರಾಮದಲ್ಲಿ 2 ಸ್ಥಾನಗಳಿಗೆ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾ. ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿಯೇ ಒಬ್ಬರು ಹೀಗೆ ಮಾಡಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಏಳೂ ಜನ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನ ಗ್ರಾಮಾಸ್ಥರು ನೀಡಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್‍ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *