ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಮೊಸಳೆ ಕೊನೆಗೂ ಸೆರೆ

ರಾಯಚೂರು: ತಾಲೂಕಿನ ಯಾಪಲದಿನ್ನಿಯಲ್ಲಿ ಹಲವು ದಿನಗಳಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಮೊಸಳೆಯನ್ನ ಕೊನೆಗೂ ಸೆರೆ ಹಿಡಿಯಲಾಗಿದೆ.

ಮಳೆಗಾಲದಲ್ಲಿ ಯಾಪಲದಿನ್ನಿ ಹಳ್ಳ ಸೇರಿಕೊಂಡಿದ್ದ ಮೊಸಳೆ ಆಗಾಗ ಗ್ರಾಮಸ್ಥರಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಹೀಗಾಗಿ ಜಾನುವಾರುಗಳನ್ನ ಗ್ರಾಮದ ಹೊರವಲಯದಲ್ಲಿ ಮೇಯಿಸಲು ಜನ ಹೆದರಿಕೊಂಡು ಹಳ್ಳದ ಹತ್ತಿರ ಹೋಗುವುದನ್ನೆ ಕಡಿಮೆ ಮಾಡಿದ್ದರು. ಈಗ ಹಳ್ಳದಲ್ಲಿ ನೀರು ಕಡಿಮೆಯಾಗಿರುವುದರಿಂದ ಮೊಸಳೆ ಗದ್ದೆಗಳಲ್ಲಿ ಓಡಾಡಿಕೊಂಡಿತ್ತು. ಮೊಸಳೆ ಗದ್ದೆಯಲ್ಲಿರುವುದನ್ನ ಕಂಡು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಚಂದ್ರಣ್ಣ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಗುಳಗಿನ, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್, ಅರಣ್ಯ ರಕ್ಷಕರಾದ ಯಲ್ಲಪ್ಪ, ಸೂಗಣ್ಣ ತಂಡ ಗ್ರಾಮಸ್ಥರ ಸಹಾಯದಿಂದ ಮೊಸಳೆಯನ್ನ ಹಿಡಿದು, ಜುರಾಲಾ ಜಲಾಶಯದ ಹಿನ್ನಿರಿನಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ಇದುವರೆಗೆ ಮೊಸಳೆ ಗ್ರಾಮದಲ್ಲಿ ಭಯಹುಟ್ಟಿಸಿತ್ತು. ಆದ್ರೆ ಜನ ಜಾನುವಾರುಗಳಿಗೆ ಯಾವುದೇ ಅಪಾಯ ಮಾಡಿರಲಿಲ್ಲ. ಮೊಸಳೆ ಹಿಡಿದಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *