ಗ್ರಾಮಕ್ಕೆ ಬರಬೇಕಂದ್ರೆ ಕ್ವಾರಂಟೈನ್ ಕಡ್ಡಾಯ- ಗ್ರಾಮ ಪಂಚಾಯಿತಿಗಳಿಂದ ಆದೇಶ

– ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರಿಗೆ ಸೀಲ್, ಕ್ವಾರಂಟೈನ್

ಚಿಕ್ಕಮಗಳೂರು: ರೆಡ್, ಆರೆಂಜ್, ಗ್ರೀನ್ ಯಾವುದೇ ಝೋನ್‍ನಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಲೇಬೇಕೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಐದಾರು ಗ್ರಾಮ ಪಂಚಾಯಿತಿಗಳು ನಿರ್ಣಯ ಮಾಡಿಕೊಂಡು ಹೊಸ ಕಾನೂನನ್ನು ಜಾರಿಗೆ ತಂದಿವೆ.

ಈಗಾಗಲೇ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಮಾರ್ಗವಾಗಿ ಮಂಗಳೂರಿನಿಂದ ನೂರಾರು ವಾಹನಗಳು ಜಿಲ್ಲೆಗೆ ಬರುತ್ತಿವೆ. ಇದು ಕೂಡ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಕಳಸ ಪಟ್ಟಣ ಮಂಗಳೂರು ಹಾಗೂ ಉಡುಪಿಯ ಗಡಿ. ಜೊತೆಗೆ ಕಾಸರಗೋಡಿನಿಂದ ಬರುವವರು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಈ ಭಾಗದ ಜನರ ಆತಂಕ ಹೆಚ್ಚಾಗಿದೆ. ಹೀಗಾಗಿ ಕಳಸ, ಹೊರನಾಡು, ಸಂಸೆ, ತೋಟದೂರು, ಇಡಕಿಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳು ತಾವೇ ರೆಸ್ಯೂಲ್ಯೂಷನ್ ಪಾಸ್ ಮಾಡಿಕೊಂಡು ಕಾನೂನನ್ನು ಜಾರಿಗೆ ತಂದಿದ್ದಾವೆ.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಯಾರೇ ಬರಲಿ, ಬಂದವರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರುವಂತೆ ಕಾನೂನು ಜಾರಿ ತಂದಿದ್ದಾರೆ. ಸರ್ಕಾರವೇ ಈ ಕಾನೂನ್ನು ಜಾರಿಗೆ ತಂದಿದೆ. ಆದರೆ ಕೊರೊನಾ ಸಮುದಾಯಕ್ಕೆ ಹರಡುತ್ತಿಲ್ಲವಾದ್ದರಿಂದ ಸರ್ಕಾರ ಹೊರ ಜಿಲ್ಲೆಯಿಂದ ಬರುವವರ ಕೈಗೆ ಮುದ್ರೆಯನ್ನಾಗಲಿ ಅಥವಾ ಕ್ವಾರಂಟೈನ್ ಮಾಡುವುದನ್ನು ಕೈಬಿಟ್ಟಿತ್ತು. ಚಿಕ್ಕಮಗಳೂರಿನಲ್ಲಿ ಕೆಲ ಗ್ರಾಮ ಪಂಚಾಯಿತಿಗಳು ಇದನ್ನು ಜಾರಿಗೆ ತರುತ್ತಿವೆ.

ಜಿಲ್ಲೆಯ ಅಕ್ಕಪಕ್ಕದ ಶಿವಮೊಗ್ಗ ಹಾಗೂ ಹಾಸನದಲ್ಲೂ 8-9 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಉಡುಪಿ ಹಾಗೂ ಮಂಗಳೂರು ಗಡಿಯ ಗ್ರಾಮ ಪಂಚಾಯಿತಿಗಳು ಈ ಕಾನೂನು ಜಾರಿಗೆ ತಂದಿವೆ. ಹಾಸನದಲ್ಲಿ ಐದು ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡವೋ ಕೂಡಲೇ ಮೂಡಿಗೆರೆಯಿಂದ ಸಖಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಿಗೆ ಬೃಹತ್ ಬಂಡೆಗಳನ್ನ ಹಾಕಿ ಮುಚ್ಚಿದ್ದಾರೆ. ಅಲ್ಲದೆ ಇಂದು ಗ್ರಾಮ ಪಂಚಾಯಿತಿಗಳು ಹೊಸ ನಿರ್ಣಯ ಜಾರಿಗೆ ತಂದಿವೆ. ತಮ್ಮ ಜಿಲ್ಲೆಯ ಗಡಿಯಿಂದ ಒಳಬರುವ ಪ್ರತಿಯೊಬ್ಬರೂ ಕೈಗೆ ಸೀಲ್ ಹಾಕಿ, ಕ್ವಾರಂಟೈನ್‍ನಲ್ಲಿರುವುದು ಕಡ್ಡಾಯ ಎಂಬ ಹೊಸ ಕಾನೂನನ್ನು ಜಾರಿಗೆ ತಂದಿವೆ. ಈ ಮೂಲಕ ಮಲೆನಾಡನ್ನು ಕೊರೊನಾ ಮುಕ್ತ ಮಾಡಲು ಪಣ ತೊಟ್ಟಿವೆ.

Comments

Leave a Reply

Your email address will not be published. Required fields are marked *