ಗ್ರಹಣ ಮೋಕ್ಷ- ಮಧ್ವ ಸರೋವರದಲ್ಲಿ ಸ್ವಾಮೀಜಿಗಳು, ಭಕ್ತರು ತೀರ್ಥಸ್ನಾನ

ಉಡುಪಿ: ಸೂರ್ಯಗ್ರಹಣ ನಿವಾರಣೆ ಆಗುತ್ತಿದ್ದಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರು ಮತ್ತು ಸ್ವಾಮೀಜಿಗಳು ಪುಣ್ಯ ಸ್ನಾನ ಮಾಡಿದ್ದಾರೆ. ಮಧ್ವ ಸರೋವರದಲ್ಲಿ ಹತ್ತಾರು ಭಕ್ತರು ಮಿಂದು ಪುನೀತರಾದರು.

ಬೆಳಗ್ಗಿನಿಂದ ಉಡುಪಿ ಕೃಷ್ಣ ಮಠದ ಒಳಗೆ ಆರು ಮಂದಿ ಮಠಾಧೀಶರು, ಭಕ್ತರು ಜಪ ತಪದಲ್ಲಿ ತೊಡಗಿದ್ದರು. 1.30ಕ್ಕೆ ಗ್ರಹಣ ಮೋಕ್ಷವಾಗುತ್ತಿದ್ದಂತೆ ಸ್ವಾಮೀಜಿಗಳು ಮಧ್ವ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿದರು. ಸ್ವಾಮೀಜಿಗಳ ಜೊತೆ ಹತ್ತಾರು ಭಕ್ತರು ಕೂಡ ಮಧ್ವ ಸರೋವರದಲ್ಲಿ ಮಿಂದು ಪುನೀತರಾದರು.

ಪರ್ಯಾಯ ಅದಮಾರು ಈಶ ಪ್ರಿಯತೀರ್ಥ ಶ್ರೀಪಾದರು ಗ್ರಹಣ ಮುಗಿದ ನಂತರ ಶ್ರೀಕೃಷ್ಣನಿಗೆ ನೈರ್ಮಲ್ಯ ವಿಸರ್ಜನೆ ಪೂಜೆಯನ್ನು ನಡೆಸಿದರು. ಶ್ರೀಕೃಷ್ಣನಿಗೆ ಎಂದಿನಂತೆ ಮಧ್ಯಾಹ್ನ 2 ಗಂಟೆಗೆ ಅಲಂಕಾರವನ್ನು ಸ್ವಾಮೀಜಿ ಆರಂಭಿಸಿದರು.

ಸಂಜೆ 5 ಗಂಟೆ ವರೆಗೂ ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ನೆರವೇರಿಸಲಾಗುವುದು ಎಂದು ಮಠ ಹೇಳಿದೆ. ಪಂಚಾಮೃತ, ತೀರ್ಥ, ಪೂಜೆ ಸೇರಿದಂತೆ ಮಹಾ ಪೂಜೆಗಳು ಅಲಂಕಾರಗಳು ಶ್ರೀಕೃಷ್ಣನಿಗೆ ನಡೆದಿದೆ.

ಕೊರೊನಾ ಲಾಕ್‍ಡೌನ್ ನಂತರ ಉಡುಪಿ ಶ್ರೀಕೃಷ್ಣ ಮಠವನ್ನು ಭಕ್ತರಿಗೋಸ್ಕರ ಇನ್ನೂ ತೆರೆದಿಲ್ಲ. ಹಾಗಾಗಿ ರಥ ಬೀದಿಯಲ್ಲಿರುವ ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನವನ್ನು ಭಕ್ತರು ಮಾಡಿದರು. ಪೂರ್ತಿ ಉಪವಾಸವಿದ್ದ ಅಷ್ಟ ಮಠದ ಸ್ವಾಮೀಜಿಗಳು ಮತ್ತು ಭಕ್ತರು ಸೂರ್ಯಗ್ರಹಣ ನಿವಾರಣೆಯಾದ ನಂತರ ಪ್ರಸಾದ ಸ್ವೀಕರಿಸಿದರು.

Comments

Leave a Reply

Your email address will not be published. Required fields are marked *