ಗೆಳೆಯನಿಗೆ ಬೈಕ್ ಕೊಟ್ಟು ಪ್ರಾಣವನ್ನೇ ಕಳೆದುಕೊಂಡ ಯುವಕ

ಹಾಸನ: ಬೈಕ್ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಹೊರವಲಯದ ದೇವೇಗೌಡ ನಗರದಲ್ಲಿ ನಡೆದಿದೆ.

23 ವರ್ಷದ ಗವಿಗೌಡ ಕೊಲೆಯಾದ ಯುವಕ. ದೇವೇಗೌಡ ನಗರದ ಕೃಷ್ಣ ಕೊಲೆಮಾಡಿದ ಆರೋಪಿಯಾಗಿದ್ದು, ಗವಿಗೌಡ ಸತ್ತ ನಂತರ ಆತನ ಸ್ನೇಹಿತರು ಕೃಷ್ಣನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಕ್ಟೋಬರ್ 19ರಂದು ಕೃಷ್ಣ ತುರ್ತು ಕೆಲಸಕ್ಕಾಗಿ ಕೊಲೆಯಾದ ಗವಿಗೌಡನ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದ.

ಬೈಕ್ ತೆಗೆದುಕೊಂಡು ನಾಳೆನೇ ವಾಪಸ್ ಹಿಂದಿರುಗಿಸುತ್ತೇನೆ ಎಂದಿದ್ದ ಕೃಷ್ಣ ಬೈಕ್ ವಾಪಸ್ ಕೊಟ್ಟಿರಿಲ್ಲ. ಇದರಿಂದ ಗವಿಗೌಡ ಆತನ ಮನೆಯ ಮುಂದೆ ಹೋಗಿ ಬೈಕ್ ಕೇಳಿದ್ದಾನೆ. ಹೊಸ ಬೈಕ್ ತೆಗೆದುಕೊಂಡು ಹೋಗಿ ಬೈಕನ್ನು ಬೀಳಿಸಿಕೊಂಡು ಬಂದಿದ್ದಾನೆ ಎಂಬ ವಿಚಾರ ತಿಳಿದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಸಿಟ್ಟಿಗೆದ್ದ ಆರೋಪಿ ಕೃಷ್ಣ ಮನೆಯಲ್ಲಿದ್ದ ಚಾಕು ತಂದು ಗೆಳೆಯನ ಎದೆಗೆ ಚುಚ್ಚಿದ್ದಾನೆ. ಪರಿಣಾಮ ಗವಿಗೌಡ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.

ತಕ್ಷಣ ಸ್ಥಳೀಯರು ಆತನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಗವಿಗೌಡ ಸಾವನ್ನಪ್ಪಿದ್ದಾನೆ. ಗವಿಗೌಡ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಆತನ ಸ್ನೇಹಿತರು ದೇವೇಗೌಡ ನಗರದ ಕೃಷ್ಣನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದ ಹಾಸನ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಆರೋಪಿಯನ್ನು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಈ ಘಟನೆ ಸಂಬಂಧ ಹಾಸನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *