ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್‍ವೈ ಭೇಟಿಯಾದ ಹೆಚ್‍ಡಿಕೆ

– ಸುಮಲತಾ ಅಂಬರೀಷ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿಯಾಗಿ ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮೈ ಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಬದಲು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು. ಖಾಸಗಿ ಪಾಲಾಗಲು ಅವಕಾಶ ಕೊಡದಂತೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸಹ ಖಾಸಗಿಯವರಿಗೆ ಮೈ ಶುಗರ್ ಕಾರ್ಖಾನೆ ನೀಡಲು ಒಪ್ಪಿಗೆ ಕೊಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದಾರೆ ಅಂತ ತಿಳಿಸಿದರು.

ಇದೇ ವೇಳೆ ತಾ.ಪಂ. ಜಿ.ಪಂ. ಮೀಸಲಾತಿ ಬಗ್ಗೆ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ಯೋಗೇಶ್ವರ್ ಬಾಲಿಶ ಹೇಳಿಕೆ ಕೊಡೋದು ಎಷ್ಟು ಸರಿ ಅಂತಾ ಅವರೇ ಯೋಚನೆ ಮಾಡಲಿ.ಮೀಸಲಾತಿ ನಿಗದಿ ಮಾಡೋದು ಚುನಾವಣಾ ಆಯೋಗ, ಸರ್ಕಾರ ಅಲ್ಲ ಎಂದು ತಿರುಗೇಟು ನೀಡಿದರು. ಮೇಕೆದಾಟು ಯೋಜನೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡುವ ಯೋಚನೆ ನಮಗೆ ಇಲ್ಲ. ಹಾಗಾದರೆ ತಮಿಳುನಾಡು ಹೊಗೇನಕಲ್ ನಲ್ಲಿ ಯಾರ ಅಪ್ಪಣೆ ತಗೊಂಡು ಜಲಾಶಯ ಕಟ್ಟಿದರು ಎಂದು ಪ್ರಶ್ನೆ ಮಾಡಿದರು.

ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ:
ಮಂಡ್ಯ ಮೈಶುಗರ್ ಖಾಸಗೀಕರಣಕ್ಕೆ ಸಂಸದರ ಒತ್ತಡ ಇದೆಯಾ ಅಂತ ಅವರನ್ನೇ ಕೇಳಬೇಕು. ಇಂತಹ ಸಂಸದರು ಮಂಡ್ಯಕ್ಕೆ ಹಿಂದೆಯೂ ಸಿಕ್ಕಿಲ್ಲ, ಮುಂದೆಯೂ ಸಿಗಲ್ಲ. ಮೊನ್ನೆ ಯಾವುದೋ ಸಭೆಯಲ್ಲಿ ಕೆಆರ್‍ಎಸ್ ಇವರೇ ರಕ್ಷಣೆ ಮಾಡುತ್ತಿರುವ ಹಾಗೆ ಹೇಳಿಕೆ ಕೊಟ್ಟಿದ್ದಾರೆ. ಕೆಆರ್‍ಎಸ್ ಬಾಗಿಲಿಗೆ ನೀರು ಹೋಗದಂತೆ ಅವರನ್ನೇ ಮಲಗಿಸಿಬಿಟ್ರೆ ಕಾರ್ಖಾನೆ ಬಿಗಿಯಾಗುತ್ತೆ ಎಂದು ಸಂಸದೆ ಸುಮಲತಾ ಅಂಬರೀಷ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಂಸದರು ಕೆಲಸ ಯಾವ ರೀತಿ ಮಾಡಬೇಕು ಅಂತ ಮಾಹಿತಿ ಪಡೆಯಲ್ಲ. ಕಾಟಾಚಾರಕ್ಕೆ ಯಾರ ಮೇಲಿನ ವೈಯಕ್ತಿಕ ದ್ವೇಷಕ್ಕೋ ಹೇಳಿಕೆ ಕೊಡೋದು ಸರಿಯಲ್ಲ. ಇದು ಬಹಳ ದಿನ ನಡೆಯಲ್ಲ. ಅನುಕಂಪದ ಮೇಲೆ ಗೆದ್ದ ಮೇಲೆ ಜನರ ಕೆಲಸ ಮಾಡುವ ಮೂಲಕ ಅವರ ಋಣ ತೀರಿಸಬೇಕು. ಅನುಕಂಪದ ಅವಕಾಶ ಸದ್ಬಳಕೆ ಮಾಡಿಕೊಳ್ಳದಿದ್ರೆ ಮುಂದೆ ಜನರೇ ಪಾಠ ಕಲಿಸುತ್ತಾರೆ ಎಂದರು. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್‍ವೈ ವಿರುದ್ಧ ಗುಡುಗಿದ ಯತ್ನಾಳ್ –  ಸಿಎಂ ನಿವಾಸದ ಗೆಸ್ಟ್ ಹೌಸ್‍ನಲ್ಲಿ ಡೀಲ್

Comments

Leave a Reply

Your email address will not be published. Required fields are marked *