ಗುರುವಾರದ ನಂತರ ಅನ್‍ಲಾಕ್ ಆಗುತ್ತಾ? ಮೊದಲ ಹಂತದಲ್ಲಿ ಯಾವುದಕ್ಕೆಲ್ಲ ವಿನಾಯ್ತಿ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅನ್‍ಲಾಕ್‍ಗೆ ಕೌಂಟ್‍ಡೌನ್ ಶುರುವಾದಂತೆ ಕಾಣುತ್ತಿದೆ. ಗುರುವಾರವೇ ರಾಜ್ಯ ಸರ್ಕಾರ ಮೂರು ಹಂತದ ಅನ್‍ಲಾಕ್ ಘೋಷಣೆ ಮಾಡುವ ಸಾಧ್ಯತೆ ಇದೆ. ನಾಳೆ ನಡೆಯಬೇಕಿದ್ದ ಕೋವಿಡ್ ಸಂಬಂಧಿತ ಸಭೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಅನ್‍ಲಾಕ್ ರೂಪುರೇಷೆಯೊಂದಿಗೆ ಗುರುವಾರದ ಸಭೆಗೆ ಬರಲು ಸಿಎಂ ತಿಳಿಸಿದ್ದಾರೆ.

ಶುಕ್ರವಾರದಿಂದ ಸಿಎಂ ಯಡಿಯೂರಪ್ಪ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಗುರುವಾರವೇ ಅನ್‍ಲಾಕ್ ಘೋಷಣೆ ಹೊರಬೀಳಬಹುದು. ಸೋಂಕು ಪ್ರಮಾಣ ಶೇಕಡಾ 5ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಸಬಹುದು ಎನ್ನಲಾಗುತ್ತಿದೆ. ಬೀದರ್ ನಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಶೇಕಡಾ 1ಕ್ಕಿಂತ ಕಡಿಮೆ ಇದೆ. ಈ ಮೂಲಕ ಬೀದರ್ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಡಿಸಿಎಂ ಅಶ್ವಥ್ ನಾರಾಯಣ ಕೂಡ ಅನ್‍ಲಾಕ್ ಸುಳಿವು ಕೊಟ್ಟಿದ್ದಾರೆ.

ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬಂದಿದೆ. ಇನ್ನು 2-3 ದಿನದಲ್ಲಿ ಸಿಎಂ ತೀರ್ಮಾನ ಕೈಗೊಳ್ತಾರೆ ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ, ಜೂನ್ 14ರ ನಂತರ ಲಾಕ್ ಸಡಿಲಿಕೆ ಆಗಲಿದೆ. ಹಂತಹಂತವಾಗಿ ಬಸ್‍ಗಳನ್ನು ಕಾರ್ಯಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದ ವಿನಾಯ್ತಿ?
* ದಿನಸಿ, ತರಕಾರಿ-ಹಣ್ಣು, ಹೂ ಅಂಗಡಿಗೆ ದಿನ ಪೂರ್ತಿ ಅವಕಾಶ?
* ಬಟ್ಟೆ ಶಾಪ್, ಜ್ಯುವೆಲ್ಲರಿ ಶಾಪ್ ಸೇರಿ ಇತರೆ ಅಂಗಡಿಗಳಿಗೂ ಅನುಮತಿ?
* ಬಸ್, ಟ್ಯಾಕ್ಸಿ, ಆಟೋ, ಮೆಟ್ರೋ ಸಂಚಾರಕ್ಕೆ ಅವಕಾಶ?
* ಬಾರ್, ಹೊಟೇಲ್, ರೆಸ್ಟೋರೆಂಟ್‍ಗೆ ಶೇ.50 ಗ್ರಾಹಕರೊಂದಿಗೆ ವಿನಾಯ್ತಿ.
* ಗಾರ್ಮೆಂಟ್ಸ್, ಕೈಗಾರಿಕೆಗಳಿಗೆ ಶೇ.50ರಷ್ಟು ಉದ್ಯೋಗಿಗಳೊಂದಿಗೆ ಅನುಮತಿ
* ಸಾಫ್ಟ್ ವೇರ್ ಕಂಪನಿಗಳಿಗೆ ಶೇ.50ರಷ್ಟು ಉದ್ಯೋಗಿಗಳೊಂದಿಗೆ ವಿನಾಯ್ತಿ

ಮೊದಲ ಹಂತದಲ್ಲಿ ಮಾಲ್, ಸಿನಿಮಾ ಥಿಯೇಟರ್‍ಗೆ ಅವಕಾಶ ಸಿಗೋ ಸಾಧ್ಯತೆ ಕಡಿಮೆ ಇದೆ. ಸ್ವಿಮ್ಮಿಂಗ್ ಪೂಲ್, ಜಿಮ್ ಪ್ರಾರಂಭಕ್ಕೂ ಅವಕಾಶ ಸಿಗದೇ ಇರಬಹುದು. ಮದುವೆ, ರಾಜಕೀಯ ಸಭೆ ಸಮಾರಂಭಗಳಿಗೆ ಅನುಮತಿ ಸಿಗೋದು ಅನುಮಾನ.

Comments

Leave a Reply

Your email address will not be published. Required fields are marked *