ಗಡಿ ಜಿಲ್ಲೆ ಬೀದರ್‌ನ್ನು ಕಾಡುತ್ತಿದೆ ಮುಂಬೈ ಕಂಟಕ- ಇಂದು ಒಂದೇ ದಿನ 42 ಪ್ರಕರಣ ಪತ್ತೆ

– ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆ

ಬೀದರ್: ಗಡಿ ಜಿಲ್ಲೆಯನ್ನು ಮುಂಬೈ ಕಂಟಕ ಬಿಟ್ಟು ಬಿಡದೆ ಕಾಡುತ್ತಿದ್ದು, ಇಂದು ಒಂದೇ ದಿನ 42 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.

ಮುಂಬೈ ಕಂಟಕದಿಂದಲೇ ಬೀದರ್ ನಲ್ಲಿ ಇಂದು 42 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಮುಂಬೈಗೂ ಬಸವಕಲ್ಯಾಣಕ್ಕೂ ಅವಿನಾಭಾವ ಸಂಬಂಧ ಎಂಬಂತಾಗಿದ್ದು, ಇಂದು ತಾಲೂಕಿನ 30 ಜನ ವಲಸೆ ಕಾರ್ಮಿಕರಿಗೆ ಮಹಾಮಾರಿ ಅಂಟಿದೆ. ಜೊತೆಗೆ ಬೀದರ್ ತಾಲೂಕಿನಲ್ಲಿ 8 ಹಾಗೂ ಚಿಟ್ಟಗುಪ್ಪ ತಾಲೂಕಿನ 4 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ.

ಇಂದು ಪತ್ತೆಯಾದ 42 ಸೋಂಕಿತರ ಪೈಕಿ 40 ಜನ ಮುಂಬೈನಿಂದ ಜಿಲ್ಲೆಗೆ ಬಂದವರಾಗಿದ್ದಾರೆ. ಅಲ್ಲದೆ ತೆಲಂಗಾಣದಿಂದ ಚಿಟ್ಟಗುಪ್ಪಗೆ ಬಂದ ಒಬ್ಬನಿಗೆ ಸೋಂಕು ಧೃಡವಾಗಿದೆ. 35 ವರ್ಷದ ಮಹಿಳೆ ರೋಗಿ ನಂ.6,697ಗೆ ಸೋಂಕು ಹೇಗೆ ತಗುಲಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತೆಲೆ ಕೆಡಿಸಿಕೊಂಡಿದ್ದು, ಪತ್ತೆ ಕಾರ್ಯ ಮಾಡುತ್ತಿದ್ದಾರೆ.

ಇಂದು 42 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಇದರಲ್ಲಿ 203 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 141 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 6 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಮುಂಬೈ ಕಂಟಕದಿಂದ ಮುಕ್ತಿ ಯಾವಾಗ ಎಂದು ಜಿಲ್ಲೆಯ ಜನ ಕೇಳುವಂತಾಗಿದೆ.

Comments

Leave a Reply

Your email address will not be published. Required fields are marked *