ಗಡಿಯೂ ಓಪನ್, ನೆಗೆಟಿವ್ ರಿಪೋರ್ಟ್ ಬೇಕಿಲ್ಲ – ಕೇರಳ, ಕರ್ನಾಟಕ ಗಡಿಯಲ್ಲಿ ಮುಕ್ತ ಸಂಚಾರ

– ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಚಾಮರಾಜನಗರ ಆರೋಗ್ಯ ಇಲಾಖೆ

ಚಾಮರಾಜನಗರ/ಮಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ನೆರೆಯ ಕೇರಳದಿಂದ ಹೆಚ್ಚು ಆತಂಕ ಎದುರಾಗಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾತ್ರ ಕೇರಳ ಗಡಿ ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಇತ್ತ ನಿದ್ದೆಗೆ ಜಾರಿದ್ದ ಚಾಮರಾಜನಗರ ಆರೋಗ್ಯ ಇಲಾಖೆ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತು ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಯನ್ನ ನೇಮಿಸಿದೆ.

ದಕ್ಷಿಣ ಕನ್ನಡ : ಕೇರಳದ ಪ್ರಮುಖ ಗಡಿಗಳಲ್ಲಿ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಮಂಗಳೂರು ಪ್ರವೇಶ ಎಂದು ಆದೇಶಿತ್ತು. ಆದರೆ ಇಂದು ತಲಪಾಡಿ ಗಡಿಯಲ್ಲಿ ಗಡಿನಾಡ ಕನ್ನಡಿಗರು ನೂರಾರು ಸಂಖ್ಯೆಯಲ್ಲಿ ಸೇರಿ ದ.ಕ.ಜಿಲ್ಲಾಡಳಿತದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಗಡಿ ಬಂದ್ ಮಾಡಲು ಬಿಡೋದಿಲ್ಲ, ನೆಗೆಟಿವ್ ರಿಪೋರ್ಟ್ ತರೋದಿಲ್ಲ ಎಂದು ತಾಕೀತು ಮಾಡಿದ್ದರು. ಬಳಿಕ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ್ದು, ಗಡಿಯಲ್ಲಿರುವ ಟೆಸ್ಟಿಂಗ್ ಸೆಂಟರಲ್ಲಿ ಉಚಿತ ಟೆಸ್ಟಿಂಗ್ ಮಾಡುವಂತೆ ವಿನಂತಿಸಿಕೊಂಡಿದೆ. ಹೀಗಾಗಿ ಮಂಗಳೂರಿಗೆ ಬರೋ ಕೇರಳಿಗರು ಯಾವುದೇ ಟೆಸ್ಟ್ ಇಲ್ಲದೆ ಮುಕ್ತವಾಗಿ ಬರುವಂತಾಗಿದೆ.

ನಡೆಯದ ತಪಾಸಣೆ: ಕರ್ನಾಟಕ ಗಡಿ ಭಾಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಸಂರಕ್ಷಿತಾರಣ್ಯದ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಕಳೆದ 15 ದಿನದ ಹಿಂದೆಯೇ ಪ್ರಯಾಣಿಕರ ಮೇಲೆ ನಿಗಾ ವಹಿಸಿತ್ತು.

ಆದರೆ ಇಂದು ಪಬ್ಲಿಕ್ ಟಿವಿಯಿಂದ ಗಡಿಯಲ್ಲಿ ಹೇಗೆ ತಪಾಸಣೆ ನಡೆಸಲಾಗ್ತಿದೆ ಅನ್ನೋ ಕುರಿತು ರಿಯಾಲಿಟಿ ಚೆಕ್ ನಡೆಸಲಾಯಿತು. ರಿಯಾಲಿಟಿ ಚೆಕ್ ವೇಳೆ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೇ ಇರಲಿಲ್ಲ. ಗಡಿಯಲ್ಲಿ ಯಾವುದೇ ತಪಾಸಣೆ ಕೂಡ ನಡೆಯುತ್ತಿರಲಿಲ್ಲ. ಕೇರಳದಿಂದ ವಾಹನಗಳಲ್ಲಿ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದ ಪ್ರಯಾಣಿಕರ ಮೇಲೆ ನಿಗಾ ವಹಿಸುವ ಕೆಲಸ ಆಗಿರಲಿಲ್ಲ. ಆರೋಗ್ಯ ಇಲಾಖೆ ವೈಫಲ್ಯ ಹಾಗೂ ಕೇರಳ ಕಂಟಕ ಚಾಮರಾಜನಗರಕ್ಕೆ ಎದುರಾಗುವ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.

ಪಬ್ಲಿಕ್ ಟಿವಿ ವರದಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಆರೋಗ್ಯ ಸಿಬ್ಬಂದಿ ದಿಢೀರ್ ಅಂತಾ ಮೂಲೆ ಹೊಳೆ ಚೆಕ್ ಪೋಸ್ಟ್ ಗೆ ಆಗಮಿಸಿದರು. ಕೇರಳದಿಂದ ರಾಜ್ಯಕ್ಕೆ ಬರುತ್ತಿದ್ದ ಪ್ರವಾಸಿಗರನ್ನು ತಪಾಸಣೆ ನಡೆಸಲಾಯಿತು. ಅಲ್ಲದೇ ಕೋವಿಡ್ ರಿಪೋರ್ಟ್ ತರದ ಪ್ರಯಾಣಿಕರನ್ನು ವಾಪಾಸ್ ಕಳುಹಿಸಿದರು. ಜಿಲ್ಲೆಗೆ ಆಗಮಿಸಬೇಕಾದರೆ ಕಡ್ಡಾಯವಾಗಿ ಕೋವಿಡ್ ರಿಪೋರ್ಟ್ ತರಬೇಕು ಅಂತಾ ಸೂಚನೆ ನೀಡಿದ್ದು, ಬಂದಂತಹ ಪ್ರಯಾಣಿಕರನ್ನು ಮತ್ತೆ ವಾಪಸ್ ಕಳುಹಿಸಲಾಗಿತ್ತು.

Comments

Leave a Reply

Your email address will not be published. Required fields are marked *