ಗಡಿಯಲ್ಲಿ ಖ್ಯಾತೆ ತೆಗೆದ ಪಾಕಿಸ್ತಾನ – ಏಳೆಂಟು ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

– ಮೂವರು ಭಾರತೀಯ ಸೈನಿಕರು ಹುತಾತ್ಮ

ಶ್ರೀನಗರ: ಎಲ್‍ಓಸಿ ಬಳಿ ಪಾಕಿಸ್ತಾನ ಮತ್ತೆ ಖ್ಯಾತೆ ತೆಗೆದಿದ್ದು, ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಪರಿಣಾಮ ಭಾರತೀಯ ಸೈನಿಕರು ಪ್ರತಿದಾಳಿ ಮಾಡಿದ್ದು, ಪಾಕಿಸ್ತಾನದ ಏಳೆಂಟು ಸೈನಿಕರನ್ನು ಹೊಡೆದುರುಳಿಸಿದೆ.

ಉರಿ ಮತ್ತು ಗುರೆಜ್ ಸೆಕ್ಟರ್ ಗಳಲ್ಲಿ ಪಾಕಿಸ್ತಾನ ಆರ್ಮಿ ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ದಾಳಿ ಮಾಡಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಎರಡು-ಮೂರು ಸೇನಾ ವಿಶೇಷ ಸೇವಾ ಗುಂಪು (ಎಸ್‍ಎಸ್‍ಜಿ) ಕಮಾಂಡೋಗಳು ಸೇರಿದಂತೆ ಏಳೆಂಟು ಸೈನಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನದ 12 ಮಂದಿ ಯೋಧರು ಗಾಯಗೊಂಡಿದ್ದಾರೆ.

ಎರಡು ಕಡೆ ನಡೆದ ಈ ಗುಂಡಿನ ದಾಳಿಯಲ್ಲಿ ಉರಿ ಸೆಕ್ಟರಿನಲ್ಲಿ ಇಬ್ಬರು ಭಾರತೀಯ ಸೈನಿಕರು ಮತ್ತು ಗುರೆಜ್ ಸೆಕ್ಟರಿನಲ್ಲಿ ಓರ್ವ ಯೋಧ ಸೇರಿ ಒಟ್ಟು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಜೊತೆಗೆ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಬಂಕರ್ ಗಳು, ಇಂಧನ ಡಂಪ್‍ಗಳು ಮತ್ತು ಲಾಂಚ್ ಪ್ಯಾಡ್‍ಗಳು ಹಾಗೂ ಭಯೋತ್ಪಾದಕರು ಅಡಗು ತಾಣಗಳು ನಾಶವಾಗಿವೆ ಎಂದು ಸೇನೆಯಿಂದ ಮಾಹಿತಿ ದೊರಕಿದೆ.

ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಸೇನೆ, ದಾವರ್, ಕೆರನ್, ಉರಿ ಮತ್ತು ನೌಗಮ್ ಸೇರಿದಂತೆ ಹಲವಾರು ಸೆಪ್ಟರ್ ಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜೊತೆಗೆ ಮಾರ್ಟಾರ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ. ಜೊತೆಗೆ ಮಕ್ಕಳು ಸೇರಿದಂತೆ ಆರು ಜನ ನಾಗರಿಕರು ಗಾಯಗೊಂಡಿದ್ದಾರೆ ತಿಳಿಸಿದೆ.

Comments

Leave a Reply

Your email address will not be published. Required fields are marked *