ಗಂಡ-ಹೆಂಡತಿ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

– ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿ

ಯಾದಗಿರಿ: ಗಂಡ-ಹೆಂಡತಿ ನಡುವೆ ನಡೆದ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗಾಜಕೂಟ ಗ್ರಾಮದಲ್ಲಿ ನಡೆದಿದೆ.

ನರಸಮ್ಮ (40) ಕೊಲೆಯಾದ ಹೆಂಡತಿಯಾಗಿದ್ದು, ಈಕೆಯನ್ನು ಗಂಡ ಭೀಮಣ್ಣ (45) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನರಸಮ್ಮ ಭೀಮಣ್ಣನ ಎರಡನೆಯ ಹೆಂಡತಿ. ಮೊದಲ ಹೆಂಡತಿ ಮೃತಪಟ್ಟ ಹಿನ್ನೆಲೆಯಲ್ಲಿ ಭೀಮಣ್ಣ, ನರಸಮ್ಮಳನ್ನು ಎರಡನೇಯ ಮದುವೆಯಾಗಿದ್ದ. ಮೊದಲ ಹೆಂಡತಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಮಕ್ಕಳಿಗೆ ಆಸ್ತಿ ನೀಡುವ ವಿಚಾರವಾಗಿ ಭೀಮಣ್ಣ ಮತ್ತು ನರಸಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ತಡ ರಾತ್ರಿ ಜಗಳ ತಾರಕಕ್ಕೇರಿ ನರಸಮ್ಮಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ಪರಾರಿಯಾಗುತ್ತಿದ್ದ ಭೀಮಣ್ಣನನ್ನು ಗ್ರಾಮಸ್ಥರು ಹಿಡಿದು ರಾತ್ರಿಯಿಡಿ ಮರಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೀಮಣ್ಣನನ್ನು ಮರದಿಂದ ಬಿಡಿಸಿ ಠಾಣೆಗೆ ಕರೆದುಕೊಂಡ ಹೋಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *