ಗಂಟಲು ಸೀಳಿ, ಕಾರು ಹರಿಸಿ ಪತ್ನಿಯ ಕೊಲೆ- ಮಾವನ ಮೇಲೆ ಹಲ್ಲೆಗೈದು ಎಸ್ಕೇಪ್ ಆಗುವಾಗ ಕಾರು ಪಲ್ಟಿ

ಚೆನ್ನೈ: ಪತ್ನಿಯ ಗಂಟಲು ಸೀಳಿ, ಆಕೆಯ ಮೇಲೆ ಕಾರು ಹರಿಸಿ ಪತಿ ಕೊಲೆ ಮಾಡಿರುವ ಘಟನೆ ಕಾಂಚಿಪುರಂ ಜಿಲ್ಲೆಯಲ್ಲಿ ನಡೆದಿದೆ.

ಕೀರ್ತನಾ(28) ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಲೆ ಮಾಡಿದ ಪತಿಯನ್ನು ಡಾ. ಗೋಕುಲ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಪತ್ನಿಯನ್ನು ಕೊಲೆ ಮಾಡಿದ್ದು ಮಾತ್ರವಲ್ಲದೆ, ಮಾವನ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

ಕೀರ್ತನಾ ಖಾಸಗಿ ಆಸ್ಪತ್ರೆಯಲ್ಲಿ ಹೆಚ್‍ಆರ್ ಆಗಿ ಕೆಲಸ ಮಾಡುತ್ತಿದ್ದು, ಗೋಕುಲ್ ವೈದ್ಯನಾಗಿದ್ದನು. ದಂಪತಿ ನಡುವೆ ಆಗಾಗ ಕಲಹವಾಗುತ್ತಲೆ ಇತ್ತು. ಲಾಕ್‍ಡೌನ್ ಸಮಯದಲ್ಲಿ ಇಬ್ಬರು ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಈ ವೇಳೆ ದಂಪತಿ ನಡುವೆ ಜಗಳವಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದರು.

ಒಂದುದಿನ ಇಬ್ಬರ ನಡುವೆ ವಿಪರೀತ ಜಗಳವಾಗಿದೆ. ಆಗ ಗೋಕುಲ್ ಸಿಟ್ಟಿನಿಂದ ಕೀರ್ತನಾ ಗಂಟಲನ್ನು ಚಾಕುವಿನಿಂದ ಸೀಳಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಕೀರ್ತನಾ ತಂದೆ ಆಕೆಯ ರಕ್ಷಣೆಗೆಂದು ಹೋಗಿದ್ದಾರೆ. ಆಗ ಅವರ ಮೇಲೆಯೂ ಗೋಕುಲ್ ಹಲ್ಲೆ ಮಾಡಿ ಕೀರ್ತನಾಳನ್ನು ಮನೆಯಿಂದ ಹೊರಗೆ ತಳ್ಳಿದ್ದಾನೆ. ನಂತರ ಆಕೆಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಇದನ್ನು ಗಮನಿಸಿದ ನೆರೆಹೊರೆಯವರು ಬಂದು ತಂದೆ- ಮಗಳ ರಕ್ಷಣೆಗೆ ಮುಂದಾಗಿದ್ದಾರೆ. ಗೋಕುಲ್ ಭಯದಿಂದ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಕೀರ್ತಾನಾ ಸಾವನ್ನಪ್ಪಿದ್ದಾಳೆ. ಈಕೆ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಹೊರೆಯವರು ನೀಡಿದ ಮಾಹಿತಿಯನ್ನು ಆಧರಿಸಿ ಎಸ್ಕೇಪ್ ಆಗುತ್ತಿದ್ದ ಗೋಕುಲ್‍ನನ್ನು ಪೊಲೀಸರು ಹೆದ್ದಾರಿಯಲ್ಲಿ ತಡೆದಿದ್ದಾರೆ. ತಪ್ಪಿಸಿಕೊಳ್ಳಲು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುವ ವೇಳೆ ಗೋಕುಲ್ ಇದ್ದಕಾರು ಪಲ್ಟಿಯಾಗಿದೆ. ಗೋಕುಲ್‍ಗೆ ಚಿಕಿತ್ಸೆಯನ್ನು ನೀಡಿ ಬಂಧಿಸಲಾಗಿದೆ.

Comments

Leave a Reply

Your email address will not be published. Required fields are marked *