ಖಾತೆ ಪಟ್ಟಿ ಪ್ರಕಟ- ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಇಲಾಖೆ ವಾಪಸ್

– ಮೂರು ದಿನಕ್ಕೆ ಮತ್ತೆ ಅದಲು ಬದಲು

ಬೆಂಗಳೂರು: ಮೂರನೇ ಬಾರಿಗೆ ಖಾತೆಗಳ ಮರು ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಳೆದುಕೊಂಡಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನ ವಾಪಸ್ ಪಡೆಯುವಲ್ಲಿ ಸಚಿವ ಸುಧಾಕರ್ ಯಶಸ್ವಿಯಾದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಜೆ.ಸಿ.ಮಾಧುಸ್ವಾಮಿ ಅವರಿಗೆ ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಆನಂದ್ ಸಿಂಗ್ ಅವರಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಹಜ್/ವಕ್ಫ್ ಖಾತೆ ನೀಡಲಾಗಿದೆ. ಮೂರನೇ ಬಾರಿ ಖಾತೆ ಮರುಹಂಚಿಕೆಯಾದ ಹಿನ್ನೆಲೆ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ನಾಳೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಚರ್ಚೆ ನಡೆಸುತ್ತಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇಂದು ಬೆಳಗ್ಗೆಯೇ ಪಬ್ಲಿಕ್ ಟಿವಿ ಸಿಎಂ ಯಡಿಯೂರಪ್ಪ ಸರ್ಕಾರ ಖಾತೆಗಳ ಮರುಹಂಚಿಕೆ ಮಾಡುತ್ತಿರುವ ಬಗ್ಗೆ ಎಕ್ಸ್ ಕ್ಲೂಸಿವ್ ವರದಿ ಮಾಡಿತ್ತು. ಖಾತೆ ಮರುಹಂಚಿಕೆ ಬಳಿಕ ಬಿಜೆಪಿ ಅಂಗಳದಲ್ಲಿ ತೆರೆಮರೆಯಲ್ಲಿ ಮತ್ತೆ ಭಿನ್ನಮತದ ಹೊಗೆ ಕಾಣಿಸಿಕೊಳ್ಳಲಾರಂಭಿಸಿದೆ. ತಮ್ಮ ಖಾತೆಯೇ ಪದೇ ಪದೇ ಬದಲಾಗಿದ್ದಕ್ಕೆ ಅಸಮಾಧಾನ ಹೊರ ಹಾಕಿರುವ ಮಾಧುಸ್ವಾಮಿ ಬೆಳಗ್ಗೆಯಿಂದಲೂ ಸಿಎಂ ಕಚೇರಿಯಿಂದ ಬಂದ ಫೋನ್ ಕರೆ ಸ್ವೀಕರಿಸದೇ ತಮ್ಮ ಕೋಪವನ್ನ ತೋರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಇದೀಗ ಸಿಎಂ ಯಡಿಯೂರಪ್ಪನವರ ಕರೆ ಸ್ವೀಕರಿಸಿರುವ ಮಾಧುಸ್ವಾಮಿ, ನನಗೆ ಬಹಳ ನೋವಾಗಿದೆ, ಏಕೆ ಹೀಗೆ ಮಾಡಿದ್ರಿ ಅನ್ನೋದು ಗೊತ್ತಾಗಲಿಲ್ಲ. ಧ್ವಜಾರೋಹಣ ಮಾಡಿ ಬಂದು ನಿಮ್ಮ ಜೊತೆ ಮಾತಾಡ್ತೀನಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *