ಖಾತೆ ಕ್ಯಾತೆಗೆ ತೇಪೆ ಹಚ್ಚಿದ್ದು ಆಯ್ತು – ಈಗ ಬಿಜೆಪಿಯಲ್ಲಿ ಮತ್ತೊಂದು ಕಗ್ಗಂಟು

ಬೆಂಗಳೂರು: ಖಾತೆ ಕಗ್ಗಂಟು ಮುಗಿಯುತ್ತಿದ್ದಂತೆ ಇದೀಗ ಬಿಜೆಪಿಯಲ್ಲಿ ಉಸ್ತುವಾರಿ ಫೈಟ್ ಆರಂಭವಾಗಿದೆ.

ಪ್ರಮುಖ ಜಿಲ್ಲೆಗಳು ಹಾಲಿ ದೊಡ್ಡ ದೊಡ್ಡವರ ಬಳಿ ಇವೆ. ಹಾಗಾದ್ರೆ ಯಡಿಯೂರಪ್ಪ ಹೇಗೆ ಹಂಚಿಕೆ ಮಾಡ್ತಾರೆ..?, ದೊಡ್ಡ ಸಚಿವರ ಜೊತೆ ರಾಜಿ ಸಂಧಾನ ನಡೆಯುತ್ತಾ ಎಂಬ ಪ್ರಶ್ನೆ ಮೂಡಿದ್ದು, ಇದರ ಇನ್‍ಸೈಡ್ ಸ್ಟೋರಿ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಬಯಲಾಗಿದೆ.

ಖಾತೆ ಸರಿಯಾಗಿ ಸಿಗಲಿಲ್ಲ, ಜಿಲ್ಲೆಯಾದ್ರೂ ಕೊಡಿ ಎಂದು ಸಿಎಂ ಮುಂದೆ ಸಚಿವ ಎಂಟಿಬಿ, ಶಂಕರ್ ಹೊಸ ಬೇಡಿಕೆ ಇಟ್ಟಿದ್ದಾರೆ. ಈ ಇಬ್ಬರು ಕೇಳುತ್ತಿರುವ ಜಿಲ್ಲೆಗಳು ಹಿರಿಯರ ಕೈಯಲ್ಲಿ ಇವೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮೇಲೆ ಸಚಿವ ಎಂಟಿಬಿ ಕಣ್ಣಿಟ್ಟಿದ್ದಾರೆ. ಸದ್ಯ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕಂದಾಯ ಸಚಿವ ಆರ್.ಅಶೋಕ್ ಕೈಯಲ್ಲಿದೆ.

ಹಾವೇರಿ ಜಿಲ್ಲಾ ಉಸ್ತುವಾರಿ ಮೇಲೆ ಸಚಿವ ಶಂಕರ್ ಕಣ್ಣಿಟ್ಟಿದ್ದು, ಸದ್ಯ ಹಾವೇರಿ ಉಸ್ತುವಾರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೈಯಲ್ಲಿದೆ. ಈ ನಡುವೆ ರಾಮನಗರ ಜಿಲ್ಲೆ ಮೇಲೆ ಕಣ್ಣಿಟ್ಟಿರುವ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೆಚ್‍ಡಿಕೆ, ಡಿಕೆಶಿ ವಿರುದ್ಧ ಹೋರಾಡಲು ನನಗೆ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯ ರಾಮನಗರ ಜಿಲ್ಲಾ ಉಸ್ತುವಾರಿ ಡಿಸಿಎಂ ಅಶ್ವಥ್‍ನಾರಾಯಣ್ ಕೈಯಲ್ಲಿ ಇದೆ.

ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬಿಡಲು ನಾನು ರೆಡಿ ಎಂದು ಅಶೋಕ್ ಒಪ್ಪಿಗೆ ಸೂಚಿಸಿದ್ದಾರೆ. ಹಾವೇರಿ ಉಸ್ತುವಾರಿ ಬದಲಾವಣೆ ಸಿಎಂಗೆ ಬಿಟ್ಟ ನಿರ್ಧಾರ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಆದರೆ ಮೂವರು ಹಿರಿಯ ಸಚಿವರಿಗೆ ಬೇರೆ ಯಾವ ಜಿಲ್ಲೆ ಕೊಡುವುದು ಎಂದು ಸಿಎಂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

Comments

Leave a Reply

Your email address will not be published. Required fields are marked *