ಖಾತೆ ಅದಲು, ಬದಲಿಗೆ ಅಸಮಾಧಾನ – ರಾತ್ರಿಯೇ ಬೆಂಗ್ಳೂರಿಗೆ ಧಾವಿಸಿದ ರಾಮುಲು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ದಿಢೀರ್ ಬೆಳವಣಿಗೆಯಲ್ಲಿ ತನ್ನ ಸಚಿವ ಸ್ಥಾನಕ್ಕೆ ಕತ್ತರಿ ಬೀಳುವ ಸುದ್ದಿ ಹೊರಬೀಳುತ್ತಿದ್ದಂತೆಯೇ ಶ್ರೀರಾಮುಲು ಅವರು ಬಳ್ಳಾರಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದಾರೆ.

ರಾಮುಲು ಆರೋಗ್ಯ ಖಾತೆ ಬದಲಾವಣೆ ವಿಚಾರ ಸಂಬಂಧ ಸಿಎಂ ಯಡಿಯೂರಪ್ಪ ನಿರ್ಧಾರ ರಾಮುಲುಗೆ ಗೊತ್ತೇ ಇಲ್ವಂತೆ. ಹೀಗಾಗಿ ಬಳ್ಳಾರಿಯಿಂದ ರಾತ್ರಿಯೇ ಬೆಂಗಳೂರಿಗೆ ರಾಮುಲು ಬಂದಿದ್ದಾರೆ. ಖಾತೆ ಬದಲಾವಣೆಗೆ ಬೇಸರಗೊಂಡಿರುವ ಸಚಿವ ರಾಮುಲು, ಇಂದು ಯಡಿಯೂರಪ್ಪ ಭೇಟಿ ಮಾಡಿ ಸಿಎಂ ಎದುರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಈ ಮೂಲಕ ಆರೋಗ್ಯ ಖಾತೆ ಬದಲಾವಣೆ ಮಾಡುವುದನ್ನು ರಾಮುಲು ನಿಕಾರಿಸಲಿದ್ದಾರೆ.

ಕೋವಿಡ್ ಸೋಂಕು ಆರಂಭದಲ್ಲಿ ಸಚಿವ ರಾಮುಲು ಅವರೇ ಎಲ್ಲವನ್ನು ನಿಭಾಯಿಸುತ್ತಿದ್ದರು. ಆದರೆ ಮಗಳ ಮದುವೆ ಹಿನ್ನೆಲೆಯಲ್ಲಿ ಸ್ವಲ್ಪ ಬಿಡುವು ಪಡೆದುಕೊಂಡಿದ್ರು. ಈ ಹಂತದಲ್ಲಿ ಸಚಿವ ಸುಧಾಕರ್ ಕೊರೊನಾ ನಿರ್ವಹಣೆಯ ಉಸ್ತುವಾರಿ ಹೊತ್ತಿದ್ರು. ನಂತರ ರಾಮುಲು ಮತ್ತೆ ಕರ್ತವ್ಯಕ್ಕೆ ವಾಪಸ್ ಆದ್ಮೇಲೆ ಇಬ್ಬರ ನಡ್ವೆ ಕೊರೊನಾ ಉಸ್ತುವಾರಿ ಸಂಬಂಧ ಮುಸುಕಿನ ಗುದ್ದಾಟ ನಡೆದಿತ್ತು. ಇಬ್ಬರು ಒಂದೊಂದು ಹೇಳಿಕೆ ನೀಡಿ ಗೊಂದಲಕ್ಕೆ ಕಾರಣ ಆಗಿದ್ರು. ಇದನ್ನೂ ಓದಿ: ದಿಢೀರ್ ಬೆಳವಣಿಗೆ – ರಾಮುಲು ಬಳಿಯಿದ್ದ ಆರೋಗ್ಯ ಖಾತೆಗೆ ಕತ್ತರಿ?, ಯಾರಿಗೆ ಯಾವ ಖಾತೆ?

ಈ ಬಗ್ಗೆ ಸಿಎಂ ಮುಂದೆಯೇ ತೀವ್ರ ಅಸಮಾಧಾನವನ್ನು ಸಚಿವ ರಾಮುಲು ಹೊರಹಾಕಿದ್ರು. ನಂತರ ಕೊರೊನಾ ಮಾಹಿತಿ ನೀಡುವುದನ್ನು ಸರ್ಕಾರ ಬಿಟ್ಟುಬಿಡ್ತು. ಕೊನೆಗೆ ಇದಕ್ಕೆ ಹೊಣೆ ಯಾರು ಎನ್ನುವುದೇ ಗೊತ್ತಾಗ್ತಿರಲಿಲ್ಲ. ಇದೀಗ ಸೋಂಕು ಹೆಚ್ಚಳ ಆಗಿದೆ. ಖಾತೆ ನಿಭಾಯಿಸಲು ಆಗಲಿಲ್ಲ ಎನ್ನುವ ಕಾರಣಕ್ಕೆ ರಾಮುಲು ಅವರ ಅಧಿಕಾರಕ್ಕೆ ಕತ್ತರಿ ಹಾಕಲಾಯ್ತಾ ಎಂಬ ಪ್ರಶ್ನೆ ಎದ್ದಿದೆ.

Comments

Leave a Reply

Your email address will not be published. Required fields are marked *