ಕ್ಷೇತ್ರದ ನಾಗರಿಕರಿಗೆ ತಲಾ 10 ಕೆ.ಜಿ.ಯಂತೆ 30 ಟನ್ ಉಚಿತ ತರಕಾರಿ ವಿತರಿಸಿದ ಸಚಿವ ಎಸ್‍ಟಿಎಸ್

ಬೆಂಗಳೂರು: ಲಾಕ್‍ಡೌನ್ ಸಂಕಷ್ಟದ ಅವಧಿಯಲ್ಲಿ ಜನತೆಗೆ ಸಂಕಷ್ಟವಾಗಬಾರದು ಎಂಬ ನಿಟ್ಟಿನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಮ್ಮ ಕ್ಷೇತ್ರದ ಹಲವೆಡೆ ಭಾನುವಾರ ಸುಮಾರು 30 ಟನ್ ಗೂ ಅಧಿಕ ತರಕಾರಿಯನ್ನು ಉಚಿತವಾಗಿ ವಿತರಣೆ ಮಾಡಿದರು.

ಮೊದಲಿಗೆ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಸ್ಥಳೀಯ 15 ಸಾವಿರಕ್ಕೂ ಹೆಚ್ಚು ನಾಗರಿಕರಿಗೆ ತಲಾ 10 ಕೆ.ಜಿ.ಯಂತೆ ತರಕಾರಿಯನ್ನು ಉಚಿತವಾಗಿ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಸಚಿವರು, ಕೊರೊನಾ ಸಂಕಷ್ಟದ ಕಾಲದಲ್ಲಿ ಲಾಕ್ಡೌನ್ ಸಹ ಆಗಿರುವುದರಿಂದ ಕೆಲವರಿಗೆ ದುಡಿಮೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ರೈತರಿಂದಲೇ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ ಉಚಿತವಾಗಿ ಹಂಚಲಾಗುತ್ತಿದೆ ಎಂದು ತಿಳಿಸಿದರು.

ಎಚ್ಚರ ತಪ್ಪಬೇಡಿ, ಜಾಗ್ರತೆ ವಹಿಸಿ; ಸಚಿವ ಎಸ್‍ಟಿಎಸ್
ಸೋಮವಾರದಿಂದ ಬೆಂಗಳೂರು ಬಹುತೇಕ ಸಂಚಾರ ಮುಕ್ತವಾಗಲಿದೆ. ಆದರೆ, ಜನತೆ ಮೈಮರೆಯಬಾರದು. ಇಲ್ಲದಿದ್ದರೆ ಇಷ್ಟು ದಿನ ಲಾಕ್‍ಡೌನ್ ಮಾಡಿದ ಉದ್ದೇಶಕ್ಕೆ ಅರ್ಥ ಸಿಗುವುದಿಲ್ಲ. ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಗತ್ಯವಿದ್ದರಷ್ಟೇ ಸಂಚಾರ ಮಾಡಬೇಕು. ಹೆಚ್ಚು ಜನಸಂದಣಿಯಾಗದಂತೆ ಎಚ್ಚರಿಕೆ ವಹಿಸಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾನ್ಸಂಟ್ರೇಟರ್ ಹಸ್ತಾಂತರ
ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಥನ ಟ್ರಸ್ಟ್ ನೀಡಿರುವ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಸಚಿವರು ಹಸ್ತಾಂತರ ಮಾಡಿದರು. ಬಿಬಿಎಂಪಿ ಹೇರೋಹಳ್ಳಿ ವಾರ್ಡ್ ಆಟೋ ಚಾಲಕರಿಗೆ ಬ್ಯಾಡ್ರಳ್ಳಿ ಪೊಲೀಸ್ ಸ್ಟೇಷನ್ ಪಕ್ಕದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ವಿವಿಧೆಡೆ ತರಕಾರಿ ಹಂಚಿಕೆ
ಸುಲಿಕೆರೆ ಗ್ರಾಮ ಪಂಚಾಯತಿಯ ರಾಮಸಂದ್ರ ಗ್ರಾಮ ಬಳಿಯ ಸರ್ಕಲ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಪಡಿತರ ಕಿಟ್ ಹಾಗೂ ತರಕಾರಿಯನ್ನು ವಿತರಿಸಲಾಯಿತು. ಈ ಮೂಲಕ ನಾಗರಿಕರ ನೆರವಿಗೆ ಧಾವಿಸಲಾಯಿತು. ಒಟ್ಟಾರೆಯಾಗಿ 30 ಟನ್ ಗೂ ಅಧಿಕ ತರಕಾರಿಯನ್ನು ರೈತರಿಂದ ಖರೀದಿಸಿ ನಾಗರಿಕರಿಗೆ ವಿತರಣೆ ಮಾಡಲಾಯಿತು.

Comments

Leave a Reply

Your email address will not be published. Required fields are marked *