ಕ್ವಾರಂಟೈನ್ ಕೇಂದ್ರದಲ್ಲಿ ಹಾವು ಕಚ್ಚಿ 6 ವರ್ಷದ ಬಾಲಕಿ ದುರ್ಮರಣ

– ಪೋಷಕರ ಜೊತೆ ಮಲಗಿದ್ದಾಗ ಘಟನೆ
– ದೆಹಲಿಯಿಂದ ವಾಪಸ್ಸಾದ ಕುಟುಂಬ

ಡೆಹ್ರಾಡೂನ್: ಕ್ವಾರಂಟೈನ್ ಸೆಂಟರಿನಲ್ಲಿ ಹಾವು ಕಚ್ಚಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರಾಖಂಡ್‍ನ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ವಾರಂಟೈನ್ ಗೆ ಒಳಗಾಗಿದ್ದ ಬಾಲಕಿ ಸೋಮವಾರ ಮುಂಜಾನೆ ತನ್ನ ಪೋಷಕರ ಜೊತೆ ನೆಲದಲ್ಲಿ ಮಲಗಿದ್ದಳು. ಈ ವೇಳೆ ಹಾವು ಕಚ್ಚಿದೆ ಎಂದು ನೈನಿತಾಳ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸವಿನ್ ಬನ್ಸಾಲ್ ಹೇಳಿದ್ದಾರೆ.

ದೆಹಲಿಯಿಂದ ವಾಪಸ್ಸಾದ ಬಾಲಕಿಯ ಕುಟುಂಬ ಬೆಟ್ಲಘಾಟ್ ನಲ್ಲಿರುವ ಶಾಲೆಯಲ್ಲಿ ಕ್ವಾರಂಟೈನ್ ಆಗಿತ್ತು. ಹಾವು ಕಚ್ಚಿದ ಕೂಡಲೇ ಬಾಲಕಿಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಅಧಿಕಾರಿ ಉಮೇಶ್ ಜೋಶಿ, ಸಹಾಯಕ ಶಿಕ್ಷಕ ಕರಣ್ ಸಿಂಗ್ ಹಾಗೂ ಸಬ್ ಇನ್ಸ್ ಪೆಕ್ಟರ್ ರಾಜ್ ಪಾಲ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 304(ಎ)(ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಎಂ ಹೇಳಿದ್ದಾರೆ.

ಕ್ವಾರಂಟೈನಲ್ಲಿರುವ ಅವ್ಯವಸ್ಥೆಯ ಬಗ್ಗೆ ಬಾಲಕಿಯ ಪೋಷಕರು ರಾಜ್ ಪಾಲ್ ಗೆ ಮೊದಲೇ ದೂರು ನೀಡಿದ್ದರು. ಕ್ವಾರಂಟೈನ್ ಕೇಂದ್ರದ ಸುತ್ತಮುತ್ತ ದಟ್ಟವಾದ ಪೊದೆಗಳಿದ್ದು, ಹಾವುಗಳಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು. ಆದರೆ ಇವರ ಮಾತನ್ನು ಸಬ್ ಇನ್ಸ್ ಪೆಕ್ಟರ್ ನಿರ್ಲಕ್ಷ್ಯಿಸಿದ್ದರು. ಅಲ್ಲದೆ ಕ್ವಾರಂಟೈನ್ ಸೆಂಟರ್ ಎತ್ತರ ಪ್ರದೇಶದಲ್ಲಿದ್ದು, ಬಾತ್ ರೂಮ್ ಹಾಗೂ ನೀರಿನ ಕೊರತೆಯ ಬಗ್ಗೆಯೂ ಕ್ವಾರಂಟೈನ್ ಗೆ ಒಳಗಾಗಿದ್ದವರು ಕಂಪ್ಲೆಂಟ್ ಮಾಡಿದ್ದರು. ಅದೇ ಶಾಲೆಯಲ್ಲಿ ಕ್ವಾರಂಟೈನ್ ಆಗಿರುವ ಮಹೇಶ್ ಚಂದ್ರ ಕೂಡ ಅವ್ಯವಸ್ಥೆಯ ಬಗ್ಗೆ ದೂರಿದ್ದಾರೆ. ಟಾಯ್ಲೆಟ್ ವ್ಯವಸ್ಥೆ ಕಟ್ಟದಾಗಿದೆ. ಅಲ್ಲದೆ ಬಾಗಿಲುಗಳು ಕೂಡ ಒಡೆದುಹೋಗಿದ್ದವು ಎಂದು ದೂರಿದ್ದರು.

ಒಟ್ಟಿನಲ್ಲಿ ಆಡಳಿತಮಂಡಳಿಯ ಬೇಜವಬ್ದಾರಿತನದಿಂದಲೇ ಬಾಲಕಿ ಮೃತಪಟ್ಟಿರುವುದು ಸ್ಪಟ್ಟಷಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *