ಕ್ವಾರಂಟೈನ್ ಅವಧಿ ಮುಗಿಸಿ ಮನೆ ಸೇರುವ ಮುನ್ನವೇ ವ್ಯಕ್ತಿ ಸಾವು

ಕಲಬುರಗಿ: ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿಸಿದ್ದ ವ್ಯಕ್ತಿ ಮನೆ ಸೇರುವ ಮುನ್ನವೇ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.

ಕಲಬುರಗಿ ನಗರದ ಇಂದಿರಾ ನಗರದ ನಿವಾಸಿ ಚಂದ್ರಕಾಂತ್ ನಾಯಿಕೋಡಿ (32) ಮೃತ ದುರ್ದೈವಿ. ಚಂದ್ರಕಾಂತ್ ಅವರು ನಗರದಲ್ಲಿರುವ ಬಿಸಿಎಂ ಹಾಸ್ಟೇಲ್‍ನಲ್ಲಿ ಕುಕ್ ಆಗಿದ್ದರು. ಅವರು ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ಕ್ವಾರಂಟೈನ್ ಮಾಡಲಾಗಿತ್ತು.

ಚಂದ್ರಕಾಂತ್ ಅವರ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಸೋಮವಾರ ಮುಗಿದಿತ್ತು. ಅವರ ಕೊರೊನ ಟೆಸ್ಟ್ ರಿಪೋರ್ಟ್ ಕೂಡ ನೆಗೆಟಿವ್ ಬಂದಿದ್ದತ್ತು. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಚಂದ್ರಕಾಂತ್ ಅವರಿಗೆ ನಿಮ್ಮ ಕ್ವಾರಂಟೈನ್ ಅವಧಿ ಮುಗಿದೆ, ಮನೆಗೆ ಹೋಗಬಹುದು ಎಂದು ತಿಳಿಸಿದ್ದರು. ಅದರಂತೆ ನಿನ್ನೆ ಚಂದ್ರಕಾತ್ ಸಂಬಂಧಿಕರೊಬ್ಬರ ಜೊತೆ ಬೈಕ್‍ನಲ್ಲಿ ಮನೆಗೆ ಬರುವಾಗ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಚಿಕಿತ್ಸೆ ಫಲಿಸದೆ ಚಂದ್ರಕಾಂತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ವೈದ್ಯಾಧಿಕಾರಿಗಳು ಚಂದ್ರಕಾಂತ್ ಅವರ ಗಂಟಲು ದ್ರವವನ್ನು ಪಡೆದು ಮತ್ತೆ ಕೊರೊನಾ ಪರೀಕ್ಷೆಗಾಗಿ ಲ್ಯಾಬ್ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *