ಕ್ರಿಮಿನಲ್ ಸತ್ತ, ಆದ್ರೆ ಅವರ ಕಥೆ ಏನು..?- ವಿಕಾಸ್ ದುಬೆ ಎನ್‌ಕೌಂಟರ್‌ಗೆ ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ

ನವದೆಹಲಿ: ಉತ್ತರ ಪ್ರದೇಶ ಗ್ಯಾಂಗ್‍ಸ್ಟರ್ ವಿಕಾಸ್ ದುವೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಂದು ಸಾವನ್ನಪ್ಪಿದ್ದು, ದುಬೆ ಎನ್‍ಕೌಂಟರ್ ಮೇಲೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸೇರಿದಂತೆ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್, ಮಧ್ಯ ಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ಬಿಜೆಪಿ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಗಾಂಧಿ, ಕ್ರಿಮಿನಲ್ ಹತ್ಯೆಯಾಗಿದೆ. ಆದರೆ ಆತನಿಗೆ ರಕ್ಷಣೆ ನೀಡುತ್ತಿದ್ದ ರಾಜಕೀಯ ನಾಯಕರ ಸಂಗತಿಯೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ಉತ್ತರ ಪ್ರದೇಶವನ್ನು ‘ಅಪರಾಧ ಪ್ರದೇಶ’ವಾಗಿ ಪರಿವರ್ತಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕಾನ್ಪುರದ ಸಂಪೂರ್ಣ ಘಟನೆಯನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತ ಮಾಜಿ ಸಿಎಂ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದು, ವಾಸ್ತವದಲ್ಲಿ ಕಾರು ಪಲ್ಟಿಯಾಗಿಲ್ಲ. ರಹಸ್ಯ ಬಯಲಿಗೆ ಬಂದರೇ ಸರ್ಕಾರ ಪತನವಾಗುತ್ತದೆ ಎಂದು ಎನ್‍ಕೌಂಟರ್ ಮಾಡಲಾಗಿದೆ’ ಎಂದು ವಿಮರ್ಶೆ ಮಾಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯೆ ನೀಡಿ, ‘ನಾವು ಅನುಮಾನಪಟ್ಟಂತೆ ನಡೆದಿದೆ. ವಿಕಾಸ್ ದುಬೆಗೆ ಹತ್ತಿರವಾಗಿದ್ದ ರಾಜಕೀಯ ನಾಯಕರು, ಪೊಲೀಸರು, ಸರ್ಕಾರಿ ಅಧಿಕಾರಿಗಳು ಹೆಸರು ಇನ್ನು ಬಯಲಿಗೆ ಬರುವುದಿಲ್ಲ. ಕಳೆದ 3-4 ದಿನಗಳಿಂದ ದುಬೆ ಸಹಚರರನ್ನು ಎನ್‍ಕೌಂಟರ್ ಮಾಡಿದ್ದರು. ಆದರೆ ಮೂರು ಎನ್‍ಕೌಂಟರ್ ಗಳು ಒಂದೇ ರೀತಿ ಏಕೆ ಇದೆ ಎಂದು ಪ್ರಶ್ನಿಸಿದ್ದಾರೆ.

ಆರೋಪಿ ವಿಕಾಸ್ ದುಬೆಯನ್ನು ಮಧ್ಯ ಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಕರೆತರುತ್ತಿದ್ದ ವೇಳೆ ಕಾನ್ಪುರ ಸಮೀಪದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದಂತೆ ಆತನಿದ್ದ ವಾಹನ ಪಲ್ಟಿಯಾಗಿತ್ತು. ಈ ವೇಳೆ ದುಬೆ ಪರಾರಿಯಾಗಲು ಯತ್ನಿಸಿ ಪೊಲೀಸ್ ಪೇದೆಯಿಂದ ತುಪಾಕಿ ಕಸಿದುಕೊಂಡು ಶೂಟ್ ಮಾಡಲು ಯತ್ನಿಸಿದ್ದ. ಈ ವೇಳೆ ಎಸ್‍ಐ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾನ್ಪುರ ಐಜಿ ಮೋಹಿತ್ ಅಗರ್ವಾಲ್ ತಿಳಿಸಿದ್ದರು.

 

Comments

Leave a Reply

Your email address will not be published. Required fields are marked *