ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ

ತುಮಕೂರು: ಜಿಲ್ಲೆಯಲ್ಲಿ ಕೊರೊನಾಗೆ ಸರ್ಕಾರಿ ವೈದ್ಯನ ಮೊದಲ ಬಲಿಯಾಗಿದೆ. ಊರ್ಡಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮಂಜುನಾಥ್ (45) ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಬಂದಿತ್ತು. ತುಮಕೂರು ನಗರದ ಆದರ್ಶ ಆಸ್ಪತ್ರೆಯಲ್ಲಿ ನಾಲ್ಕು ದಿನ ಚಿಕಿತ್ಸೆ ಪಡೆದಿದ್ದರೂ, ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ಮೂರು ದಿನದ ಹಿಂದೆ ಸಿದ್ದಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮೊದಲೇ ಬಿಪಿ, ಶುಗರ್ ನಿಂದ ಬಳಲುತಿದ್ದ ಡಾ.ಮಂಜುನಾಥ್ ಗೆ ಕೋವಿಡ್ ಇನ್ನಷ್ಟು ಸಂಕಷ್ಟ ತಂದೊಡ್ಡಿ ಆರೋಗ್ಯ ಬಿಗಡಾಯಿಸಿತು. ಪರಿಣಾಮ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ವ್ಯಾಕ್ಸಿನ್ ತೆಗೆದುಕೊಳ್ಳುವಲ್ಲಿ ಡಾ.ಮಂಜುನಾಥ್ ಅಸಡ್ಡೆ ತೋರಿದ್ದರು ಎನ್ನಲಾಗಿದೆ. ಆರೋಗ್ಯ ಇಲಾಖೆಯ ಪ್ರತಿಯೊಬ್ಬರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂಬ ಆದೇಶ ಇದ್ದರೂ, ಇವರು ಒಂದೂ ಡೋಸ್ ನ್ನು ತೆಗೆದುಕೊಂಡಿಲ್ಲ. ವ್ಯಾಕ್ಸಿನ್ ತೆಗೆದುಕೊಂಡಿದ್ದರೆ ಜೀವಕ್ಕೆ ಅಪಾಯವಾಗುತ್ತಿರಲಿಲ್ಲ ಎನ್ನಲಾಗಿದೆ.

ಡಾ.ಮಂಜುನಾಥ್ ಅವಿವಾಹಿತರಾಗಿದ್ದು, ಒಂಟಿಯಾಗಿ ವಾಸವಿದ್ದರು ಎನ್ನಲಾಗಿದೆ. ಇವರಿಗೆ ವ್ಯಾಕ್ಸಿನ್ ಬಗ್ಗೆ ನಂಬಿಕೆ ಇರಲಿಲ್ಲ. ಕೋವಿಡ್ ಬಂದರೂ ನಾನು ಜಯಿಸುತ್ತೇನೆ ಎನ್ನುತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *