ಕೋವಿಡ್‍ಗೆ ಕೊರೊನಾ ವಾರಿಯರ್ ಬಲಿ – ಸಹ ಸಿಬ್ಬಂದಿ ಕಣ್ಣೀರು

– ಆರೋಗ್ಯ ಸಚಿವ ಶ್ರೀರಾಮುಲುರಿಂದ ಸಂತಾಪ

ಯಾದಗಿರಿ: ಒಂದು ಕಡೆ ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಕೊವೀಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಸಹೋದ್ಯೋಗಿ ಮೃತ ದೇಹಕಂಡು ಯಾದಗಿರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

ಯಾದಗಿರಿ ತಾಲೂಕಿನ ಕೌಳ್ಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, 12 ವರ್ಷದಿಂದ ಸ್ಟಾಫ್ ನರ್ಸ್ ಆಗಿದ್ದ 34 ವರ್ಷದ ಗೀತಾ ಮೃತಪಟ್ಟಿರುವ ಕೊರೊನಾ ವಾರಿಯರ್. ಗೀತಾ ಅವರಿಗೆ ಕಳೆದ ಸೆಪ್ಟೆಂಬರ್ 19ರಂದು ಕೊರೊನಾ ದೃಢವಾಗಿತ್ತು. ಹೀಗಾಗಿ ಗೀತಾ ಅವರನ್ನು ಯಾದಗಿರಿ ಹೊರವಲಯದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೊದಲ ಬಾರಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಗೀತಾ ಆಸ್ಪತ್ರೆಯಿಂದ ಬಹು ಬೇಗನೆ ಬಿಡುಗಡೆಯಾಗಿದ್ದರು. ಆದರೆ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಗೀತಾ ಅವರಿಗೆ ಮತ್ತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆ ಸೆಪ್ಟೆಂಬರ್ 29ರಂದು ಎರಡನೇ ಬಾರಿಗೆ ಕೊರೊನಾ ದೃಢವಾಗಿತ್ತು. ಮತ್ತೆ ಯಾದಗಿರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೀತಾ ಅವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಗೀತಾ ಅವರ ಗಂಡನ ಜೊತೆ ಯಾದಗಿರಿ ನಗರದ ನಜರಾತ್ ಕಾಲೋನಿಯಲ್ಲಿ ವಾಸವಾಗಿದ್ದರು. ಕೊರೊನಾ ವಾರಿಯರ್ ಗೀತಾ ಸಾವಿಗೆ ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ. ಗೀತಾ ಸಾವಿನ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ಗೀತಾ ಅವರ ಕುಟುಂಬಕ್ಕೆ ಆರೋಗ್ಯ ಇಲಾಖೆಯಿಂದ, ಸಿಗುವ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *