ಕೋಲಾರದ ಚಿನ್ನದ ಕಳ್ಳನಿಗೂ ಕೊರೊನಾ- ಬಂಧಿಸಿದ ಪೊಲೀಸರಿಗೂ ಸೋಂಕಿನ ಭೀತಿ

– ಜೈಲಿನ 20 ಖೈದಿಗಳಿಗೂ ಕ್ವಾರಂಟೈನ್

ಕೋಲಾರ: ಚಿನ್ನದ ಕಳ್ಳರು ನೂರಾರು ಅಡಿ ಆಳದ ಗಣಿ ಪ್ರದೇಶದಲ್ಲಿ ಸಿಲುಕಿ ಭಾರೀ ಸುದ್ದಿಯಾಗಿದ್ದರು. ಗಣಿಗೆ ಇಳಿದಿದ್ದ ಐವರಲ್ಲಿ ಇಬ್ಬರು ಮಣ್ಣಾದರೆ, ಮತ್ತೋರ್ವನ ಶವ ಪಾತಾಳ ಸೇರಿದೆ. ಇದೀಗ ಗಣಿಯಿಂದ ಪಾರಾಗಿ ಬಂದ ಕಳ್ಳನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೆಜಿಎಫ್ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಇಳಿದ 5 ಜನರಲ್ಲಿ 3 ಜನ ಮೃತಪಟ್ಟರೆ, ಮತ್ತೊಬ್ಬನಿಗೆ ಕೊರೊನಾ ವಕ್ಕರಿಸಿದೆ. ಕೋಲಾರದ ಕೆಜಿಎಫ್ ನಲ್ಲಿ ಮೇ-13 ರಂದು ರಾತ್ರಿ ಕೆಜಿಎಫ್ ನಗರದ ಮಾರಿಕುಪ್ಪಂನ ಮೈಸೂರು ಮೈನ್ಸ್? ನಲ್ಲಿ ಕೆಜಿಎಫ್‍ನ ಐವರು ನಿವಾಸಿಗಳು ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನ ಮಾಡಲು ತೆರಳಿದ್ದರು, ಈ ಪೈಕಿ ಮೂವರು ಚಿನ್ನದ ಗಣಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಕೆಜಿಎಫ್ ನಗರದ ಬೀರ್ ಶಾಪ್‍ನ ದೊಡ್ಡಿಯ ನಿವಾಸಿ ಗಳಾದ ಪಡಿಯಪ್ಪ, ಜೊಸೆಫ್, ಕಂದ, ಮೃತಪಟ್ಟಿದ್ದಾರೆ.

ವಿಕ್ಟರ್ ಹಾಗೂ ಕಾರ್ತಿಕ್‍ರನ್ನು ಬಂಧಿಸಲಾಗಿದೆ. ಆದರೆ ಕಿಂಗ್‍ಪಿನ್ ರಿಚರ್ಡ್ ತಲೆ ಮರೆಸಿಕೊಂಡಿದ್ದ, ಮೇ-14ರ ಸಂಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಆತನಿಗೆ ಉಸಿರಾಟದ ತೊಂದರೆ ಇದೆ ಎಂದು ಹೇಳಿಕೊಂಡಿದ್ದ. ಇದಕ್ಕೆ ನ್ಯಾಯಾಧೀಶರ ಆದೇಶದ ಮೇರೆಗೆ ರಿಚರ್ಡ್‍ಗೆ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ರೋಗಿ ನಂ.1146 ರಿಚರ್ಡ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಿಚರ್ಡ್‍ನನ್ನು ಬಂಧಿಸಲು ಹೋಗಿದ್ದ, ಬಂಧಿಸಿ ಕರೆ ತಂದಿದ್ದ 9 ಜನ ಪೊಲೀಸರಿಗೂ ಇದೀಗ ಕೊರೊನಾ ಭಯ ಉಂಟಾಗಿದೆ. ಆಘಾತಗೊಂಡಿದ್ದ 9 ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಬಂಧಿಸಿ ಕಳಿಸಿದ್ದ ವೇಳೆ ಕಾರಾಗೃಹದಲ್ಲೂ ಪ್ರತ್ಯೇಕ ಸೆಲ್‍ನಲ್ಲಿ ಇರಿಸಲಾಗಿತ್ತು. ಆದರೂ ಜೈಲಿನಲ್ಲಿದ್ದ ಸುಮಾರು 20 ಜನ ಖೈದಿಗಳನ್ನು ಜೈಲಿನಲ್ಲೇ ಕ್ವಾರಂಟೈನ್ ಮಾಡಿ, ನಿಗಾ ವಹಿಸಲಾಗಿದೆ.

Comments

Leave a Reply

Your email address will not be published. Required fields are marked *