ಕೋಲಾರದಲ್ಲಿ ಕಳ್ಳನಿಗೆ ಕೊರೊನಾ – ಪೊಲೀಸ್ ಇಲಾಖೆಯಿಂದ ತಪ್ಪಿತು ಅನಾಹುತ

– ಜಿಲ್ಲಾಡಳಿತಕ್ಕೆ ತಲೆ ನೋವಾದ ಖದೀಮನ ಟ್ರಾವಲ್ ಹಿಸ್ಟರಿ

ಕೋಲಾರ: ಕೋಲಾರದಲ್ಲಿ ಕಳ್ಳನಿಂದ ಪೊಲೀಸರಿಗೂ ಕೂಡ ಕೊರೊನಾ ಅತಂಕ ಶುರುವಾಗಿದೆ. ರೋಗಿ ಸಂಖ್ಯೆ 1128 ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇದೀಗ ಕೆಜಿಎಫ್ ಪೊಲೀಸರನ್ನು ಬೆಚ್ಚಿ ಬೀಳಿಸಿದೆ.

ಮೇ 14ರಂದು ಕೋಲಾರ ಜಿಲ್ಲೆಯ ಕೆಜಿಎಫ್‍ನ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಯಲ್ಲಿ ಐದು ಜನ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ನೂರಾರು ಅಡಿಯಲ್ಲಿರುವ ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದರು. ಇನ್ನು ಐದು ಜನ ಕಳ್ಳರಲ್ಲಿ ಇಬ್ಬರು ಬಚಾವ್ ಅಗಿ ಪೊಲೀಸರ ಅತಿಥಿಯಾಗಿದ್ದರು.

ಜೊತೆಗೆ ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಓರ್ವನ ಮೃತ ದೇಹಕ್ಕೆ ಇಂದೂ ಸಹ ಕಾರ್ಯಾಚರಣೆ ನಡೆಯುತ್ತಲೇ ಇದೆ. ಸೆರೆ ಸಿಕ್ಕ ಇಬ್ಬರು ಕಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ನ್ಯಾಯಾಧೀಶರ ಆದೇಶದ ಮೇರೆಗೆ ಓರ್ವನಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಸದ್ಯ ಆತನಲ್ಲಿ ಸೋಂಕು ದೃಢವಾಗಿದ್ದು, ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಅದೃಷ್ಟವಶಾತ್ ಅಂದು ಕೆಜಿಎಫ್ ಪೊಲೀಸರು ತೆಗೆದುಕೊಂಡಿದ್ದ ಮುನ್ನೆಚ್ಚರಿಕೆ ಕ್ರಮದಿಂದ ಸಾಕಷ್ಟು ಪೊಲೀಸ್ ಅಧಿಕಾರಿಗಳು ಬಚಾವ್ ಆಗಿದ್ದಾರೆ. ಸೋಂಕು ಇರುವ ಲಕ್ಷಣ ಕಂಡ ಕೂಡಲೇ ಕಳ್ಳನನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿದ್ದಾರೆ. ಜೊತೆಗೆ ಜಾಸ್ತಿ ಜನ ಪೊಲೀಸರು ಅವನ ವಿಚಾರಣೆಗೆ ಹೋಗಿಲ್ಲ. ಹೋದವರು ಸುರಕ್ಷಿತ ಕ್ರಮವನ್ನು ಅನುಸರಿಸಿದ್ದಾರೆ. ಇಲ್ಲವಾದಲ್ಲಿ ಕೆಜಿಎಫ್‍ನ ಅರ್ಧ ಪೊಲೀಸರು ಕ್ವಾರಂಟೈನ್ ಆಗುವ ಸಾಧ್ಯತೆ ಇತ್ತು.

ಒಟ್ಟಾರೆ ಕಳ್ಳರಿಗೆ ಭಯ ಹುಟ್ಟಿಸುತ್ತಿದ್ದ ಪೊಲೀಸರು, ಇದೀಗ ಕೊರೊನಾ ಸೋಂಕಿತ ಕಳ್ಳನನ್ನ ಕಂಡು ಭಯ ಬೀಳುವಂತಾಗಿದೆ. ಈತ ಕೆಜಿಎಫ್ ನಗರದಲ್ಲೇ ಅಟೋ ಚಾಲಕನಾಗಿದ್ದ, ಈತನ ಟ್ರಾವಲ್ ಹಿಸ್ಟರಿ ಕೂಡ ತಲೆನೋವಾಗಿದೆ. ಈತನ ಮೂಲ ಪತ್ತೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

Comments

Leave a Reply

Your email address will not be published. Required fields are marked *