ಕೋಟೆನಾಡಿನ ಟೊಮೆಟೊ ಬೆಳೆಗಾರರಲ್ಲಿ ಉತ್ಸಾಹ ಮೂಡಿಸಿದ ಮಾರುಕಟ್ಟೆ

ಚಿತ್ರದುರ್ಗ: ಟೊಮೆಟೊ ಬೆಳೆದು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿ, ಟೊಮೆಟೊ ಸಹವಾಸವೇ ಬೇಡವೆಂದು ಸುಮ್ಮನಾಗಿದ್ದ ಜಿಲ್ಲೆಯ ರೈತರಲ್ಲಿ ಖಾಸಗಿ ಮಾರುಕಟ್ಟೆಯೊಂದು ಮತ್ತೆ ಉತ್ಸಾಹ ಮೂಡಿಸಿದೆ.

ಜಿಲ್ಲೆಯ ಚಳ್ಳಕೆರೆ ತಾಲೂಕು ಚಿಕ್ಕಮ್ಮನಹಳ್ಳಿ ಬಳಿ ಖಾಸಗಿ ಮಾರುಕಟ್ಟೆಯೊಂದು ನಿನ್ನೆಯಿಂದ ಆರಂಭವಾಗಿದೆ. ಹೀಗಾಗಿ ಕಳೆದ 18 ತಿಂಗಳಿಂದ ಟೊಮೆಟೊ ಬೆಳೆದು, ಮಾರಾಟ ಮಾಡಲಾಗದೆ, ಹೊಲದಲ್ಲೇ ಕೊಳೆತು ಹೋಗ್ತಿದ್ದ ಟೊಮೆಟೊದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೊರೊನಾ ಮಹಾಮಾರಿ ಆರ್ಭಟದ ವೇಳೆ ಎದುರಾದ ಲಾಕ್‍ಡೌನ್ ನಿಂದಾಗಿ ಸಹ ಕೋಲಾರದ ಮಾರುಕಟ್ಟೆಗೆ ಟೊಮೆಟೊ ಸಾಗಿಸಲಾಗದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ, ಈ ಭಾಗದ ರೈತರು ಕಂಗಾಲಾಗಿದ್ದರು. ಸರ್ಕಾರದಿಂದ ಪರಿಹಾರ ಬರುವುದೆಂಬ ನಿರೀಕ್ಷೆಯಲ್ಲಿದ್ದರು.

ಈ ವೇಳೆ ಆಂಧ್ರಪ್ರದೇಶದ ವರ್ತಕರಾದ ಅನಂತರೆಡ್ಡಿ ಹಾಗೂ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ರೈತ ವೆಂಕಟೇಶ ರೆಡ್ಡಿ ನೇತೃತ್ವದಲ್ಲಿ ಚಿಕ್ಕಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಟೊಮೆಟೊ ಮಾರುಕಟ್ಟೆ ನಿನ್ನೆಯಿಂದ ಆರಂಭವಾಗಿದ್ದು, ರಾಜ್ಯದ ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂಧ್ರ ಪ್ರದೇಶದ ರೈತರು ಕೂಡ ಈ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.

ಈ ಮಾರುಕಟ್ಟೆಯಿಂದಾಗಿ ರೈತರಿಗೆ ತಗುಲುತಿದ್ದ ದುಬಾರಿ ಸಾರಿಗೆ ವೆಚ್ಚ ಉಳಿತಾಯವಾಗಲಿದೆ. ಟೊಮೆಟೊ ಗುಣಮಟ್ಟಕ್ಕೆ ತಕ್ಕಂತೆ ಸೂಕ್ತ ಬೆಲೆ ಸಿಗುತ್ತಿರುವ ಪರಿಣಾಮ ಉತ್ತಮ ಲಾಭವಾಗುತ್ತಿದೆ ಎಂದು ಅನ್ನದಾತರು ಸಂತಸ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *