ಕೊಲೆಗಾರನ ಸುಳಿವು ಕೊಟ್ಟ ಚಪ್ಪಲಿ ಗುರುತು

ಬೆಂಗಳೂರು: ರಾಜಧಾನಿಯಲ್ಲಿ ಸಿನಿಮಾ ಶೈಲಿಯ ಮರ್ಡರ್ ಸ್ಟೋರಿಗೆ ಚಪ್ಪಲಿ ಗುರುತಿನಿಂದ ಪೊಲೀಸರು ಭೇದಿಸಿದ್ದಾರೆ.

ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಬ್ ಪಾಳ್ಯ ಬಿಡಿಎ ಪಾರ್ಕ್ ನಲ್ಲಿ ಕಳೆದ ಮೇ 15ರಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಬೆಳಕಿನ ಜಾವ ವಾಕಿಂಗ್ ಬಂದ ಸ್ಥಳೀಯರು, ಬರ್ಬರವಾಗಿ ಕೊಲೆಯಾಗಿದ್ದ ವ್ಯಕ್ತಿಯನ್ನು ನೋಡಿ, ಹೆಣ್ಣೂರು ಪೊಲೀಸರಿಗೆ ವಿಚಾರ ತಿಳಿಸಿದ್ದರು.

ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಜೊತೆಗೆ ಕೊಲೆಯಾದವನು ಮತ್ತು ಕೊಲೆ ಮಾಡಿದವನು ಕೂಡ ಮೊಬೈಲ್ ಬಳಸುತ್ತಿರಲಿಲ್ಲ ಅನ್ನೋ ವಿಚಾರ ಗೊತ್ತಾಗಿತ್ತು. ಆದ್ರೆ ಕೊಲೆಯಾದ ಸ್ಥಳದಲ್ಲಿ ಕೊಲೆ ಆರೋಪಿ ರಕ್ತ ತುಳಿದುಕೊಂಡು ಹೋಗಿರುವ ಚಪ್ಪಲಿ ಗುರುತು ಪತ್ತೆಯಾಗಿತ್ತು. ಚಪ್ಪಲಿ ಗುರುತಿನ ಬೆನ್ನು ಬಿದ್ದ ಪೊಲೀಸರು, ಆ ಪಾರ್ಕ್ ಗೆ ಬರುವ ಅಕ್ಕಪಕ್ಕದಲ್ಲಿ ವಾಸವಾಗಿರುವ ಸುಮಾರು 60ಕ್ಕೂ ಹೆಚ್ಚು ಜನರನ್ನು ಕರೆಸಿ, ಅವರ ಚಪ್ಪಲಿಯನ್ನು ತೊಳೆದು, ಮರಳ ಮೇಲೆ ನಡೆಸಿದ್ರು.

ಈ ವೇಳೆ ಆರೋಪಿ ಸತೀಶ್ ಚಪ್ಪಲಿ ಗುರುತು, ಸ್ಥಳದಲ್ಲಿದ್ದ ಗುರುತು ಹೊಂದಾಣಿಕೆ ಆಗಿತ್ತು. ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರ ಭಾಷೆಯಲ್ಲಿ ವಿಚಾರಣೆ ವೇಳೆ ಕೊಲೆಯಾದ ಅಶೋಕ್ ಮತ್ತು ಸತೀಶ್ ನಡುವೆ ಮಲಗುವ ಜಾಗದ ವಿಚಾರವಾಗಿ ಗಲಾಟೆ ಉಂಟಾಗಿ ಈ ಕೊಲೆ ನಡೆದಿದೆ ಅನ್ನೋದನ್ನು ಬಾಯಿ ಬಿಟ್ಟಿದ್ದಾನೆ.

Comments

Leave a Reply

Your email address will not be published. Required fields are marked *