ಕೊರೊನಾ ಸಂಕಷ್ಟದಲ್ಲಿದ್ದ ರೈತರು ಮಳೆ ಅವಾಂತರದಿಂದ ಕಂಗಾಲು

ಹಾಸನ: ಇಷ್ಟು ದಿನ ಕೊರೊನಾ ಲಾಕ್‍ಡೌನ್‍ನಿಂದಾಗಿ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದ ರೈತರು, ಇದೀಗ ಬಿರುಗಾಳಿ ಮಳೆಯಿಂದ ಆದ ಅವಾಂತರಕ್ಕೆ ಕಂಗಾಲಾಗಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ವಿವಿಧೆಡೆ ಸುರಿದ ಬಿರುಗಾಳಿ ಸಹಿತ ಮಳೆಯಿಂದ ರೈತರಿಗೆ ಭಾರೀ ನಷ್ಟಬಾಗಿದೆ. ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಮನೆಯ ಹೆಂಚುಗಳು ಹಾರಿಹೋಗಿದೆ.

ದಿಂಡಗೂರು ಗ್ರಾಮದ ರೈತ ನಾಗರಾಜು ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಯ ಹೆಂಚುಗಳು, ಕೊಟ್ಟಿಗೆಯ ಶೀಟ್‍ಗಳು ಕೂಡ ಪುಡಿಯಾಗಿವೆ. ಹೆಂಚುಗಳು ಒಡೆದು ಮನೆಯೊಳಗೆ ಮಳೆ ನೀರು ಸುರಿದೆ. ಇದರಿಂದ ಮನೆಯ ಅಟ್ಟದಲ್ಲಿದ್ದ ಸುಮಾರು 5 ಸಾವಿರಕ್ಕೂ ಹೆಚ್ಚು ಕೊಬ್ಬರಿಗಳು ನೀರು ಸೋರಿ ಹಾನಿಗೊಳಗಾಗಿವೆ.

ಇತ್ತ ರೈತ ಸತೀಶ್ ಅವರ ಮೂರು ತೆಂಗಿನ ಮರಗಳು ಉರುಳಿ ಬಿದ್ದಿವೆ. ರೈತರಿಗೆ ಮಳೆಯಿಂದ ಉಂಟಾದ ನಷ್ಟದ ಬಗ್ಗೆ ಚನ್ನರಾಯಪಟ್ಟಣದ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *