ಕೊರೊನಾ ಭೀತಿ- ಸಫಾರಿಗೆ ಒಲವು ತೋರದ ಪ್ರವಾಸಿಗರು

ಚಾಮರಾಜನಗರ: ಮಹಾಮಾರಿ ಕೊರೊನಾಗೆ ಜನರು ಆತಂಕಗೊಂಡಿದ್ದು, ಲಾಕ್‍ಡೌನ್ ಅನ್‍ಲಾಕ್ ಆದ ಮೊದಲ ವೀಕೆಂಡ್‍ನಲ್ಲಿ ಬಂಡೀಪುರ ಸಫಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರಲಿಲ್ಲ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯಕ್ಕೆ ವೀಕೆಂಡ್ ಇದ್ದರೂ ಪ್ರವಾಸಿಗರು ಬಂದಿಲ್ಲ. ಬಂಡೀಪುರದ ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರ ಇದೆ. ಈಗಾಗಲೇ ಸಫಾರಿಗೆ ಅರಣ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೂ ಕೋವಿಡ್-19 ಭೀತಿಯಿಂದ ಸಫಾರಿಗೆ ಜನರು ಒಲವು ತೋರಿಲ್ಲ.

ವೀಕೆಂಡ್ ಬಂದರೆ ಸಾಕು ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಪ್ರಿಯರು ಸಫಾರಿಗೆ ಆಗಮಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ಮಾಡಲಾಗಿತ್ತು. ಈಗ ಸಫಾರಿ ಆರಂಭವಾಗಿದ್ದು, ಅರಣ್ಯ ಇಲಾಖೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಕಡಿಮೆ ಪ್ರವಾಸಿಗರು ಆಗಮಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಸಫಾರಿ ವಾಹನಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಸಫಾರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಇನ್ನೂ ಸಫಾರಿ ವಾಹನದಲ್ಲಿ ಶೇ.50ರಷ್ಟು ಮಂದಿ ಪ್ರಯಾಣಕ್ಕಷ್ಟೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಸಫಾರಿಗೆ ಕೆಲವೇ ಪ್ರವಾಸಿಗರು ಆಗಮಿಸಿದ್ದಾರೆ. ಈಗ ಬಂದಿರುವ ಪ್ರಾಣಿ ಪ್ರಿಯರು ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *