ಕೊರೊನಾ ಭಯಕ್ಕೆ ಗಂಟುಮೂಟೆ ಸಮೇತ ಊರಿಗೆ ಹೊರಟ ಜನ

– ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇತ್ತ ಕೊರೊನಾ ಭಯದಿಂದ ಮತ್ತು ಭಾನುವಾರ ಕರ್ಫ್ಯೂ ಜಾರಿಯಾಗುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.

ಬೆಂಗಳೂರಿಗರು ಮತ್ತೆ ಲಾಕ್‍ಡೌನ್ ಆಗುತ್ತೆ ಎಂಬ ಭಯದಲ್ಲಿ ತಮ್ಮ ತಮ್ಮ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಾರೆ. ಅನೇಕರು ಗಂಟು ಮೂಟೆ ಸಮೇತ ಊರುಗಳತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನವಯುಗ ಟೋಲ್ ಬಳಿ ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.

ಅಲ್ಲದೇ ಮನೆಯ ಪಾತ್ರೆ, ಸಾಮಾನುಗಳು ಮತ್ತು ಪೀಠೋಪಕರಣಗಳ ಸಮೇತ ಗುಂಪು ಗುಂಪಾಗಿ ಜನರು ತೆರಳುತ್ತಿದ್ದಾರೆ. ತುಮಕೂರು ರಸ್ತೆ ಮಾತ್ರವಲ್ಲದೇ ಮೈಸೂರು ರಸ್ತೆಯಲ್ಲೂ ಟ್ರಾಫಿಕ್ ಟಾಮ್ ಉಂಟಾಗಿದ್ದು, ಸಾಲು ಸಾಲಾಗಿ ವಾಹನಗಳು ನಿಂತಿವೆ.

ಕೊರೊನಾ ನಿಯಂತ್ರಣಕ್ಕಾಗಿ ಇಂದು ರಾತ್ರಿ 8 ಗಂಟೆಯಿಂದ ಭಾನುವಾರ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ.

ಇನ್ನೂ ಬೆಂಗಳೂರಿನಲ್ಲಿ ಕೊರೊನಾ ದಿನದಿಂದ ಸ್ಫೋಟವಾಗುತ್ತಲೇ ಇದೆ. ಈಗಾಗಲೇ ತಜ್ಞರು ಕೂಡ ಮತ್ತೆ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ತಮ್ಮ ಅಭಿಪ್ರಾಯವನ್ನು ಸಿಎಂ ಮುಂದೆ ಪ್ರಸ್ತಾಪಿಸಿದ್ದಾರೆ. ಜೊತೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೂಡ ಮುಗಿದಿದೆ. ಹೀಗಾಗಿ ಸೋಮವಾರ ಮತ್ತೆ ಲಾಕ್‍ಡೌನ್ ಆಗುತ್ತದೆ ಎಂದು ಜನರು ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನಿಂದ ತಮ್ಮ ಗ್ರಾಮಗಳಿಗೆ ಜನರು ಹೋದರೆ ಹಳ್ಳಿಗಳಿಗೂ ಸೋಂಕು ಹಬ್ಬುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *