ಕೊರೊನಾ ಬಿಕ್ಕಟ್ಟು ದೈವೇಚ್ಛೆ: ನಿರ್ಮಲಾ ಸೀತಾರಾಮನ್

-ಜಿಎಸ್‍ಟಿ ಸಂಗ್ರಹದಲ್ಲಿ ಭಾರೀ ಇಳಿಕೆ

ನವದೆಹಲಿ: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ 41ನೇ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕೊರೊನಾ ಬಿಕ್ಕಟ್ಟು ದೈವೇಚ್ಛೆ ಆಗಿದ್ದು, ಜಿಎಸ್‍ಟಿ ಸಂಗ್ರಹದ ಮೊತ್ತದಲ್ಲಿ ಭಾರೀ ಇಳಿಕೆಯಾಗಿದೆ ಎಂದಿದ್ದಾರೆ.

ಆರ್ಥಿಕ ವರ್ಷ 2020-21ರಲ್ಲಿ 2.35 ಲಕ್ಷ ಕೋಟಿ ರೂಪಾಯಿಯಷ್ಟು ಜಿಎಸ್‍ಟಿ ಸಂಗ್ರಹ ಕೊರತೆಯಾಗುವ ಅನುಮಾನಗಳಿವೆ. ಕೊರೊನಾ ದೇಶದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಹಾಗಾಗಿ ಈ ವರ್ಷ ಅಸಾಧಾರಣ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ವರ್ಷ ಆರ್ಥಿಕ ಬಿಕ್ಕಟ್ಟು ಸಹ ಕಾಣಬಹುದಾಗಿದೆ.

2020ರಲ್ಲಿ ಕೇಂದ್ರ ಸರ್ಕಾರ 1.65 ಲಕ್ಷ ಕೋಟಿ ರೂ. ಜಿಎಸ್‍ಟಿ ಪರಿಹಾರ ಬಿಡುಗಡೆ ಮಾಡಿದೆ. ಮಾರ್ಚ್ ನಲ್ಲಿ 13,806 ಕೋಟಿ ರೂ. ರಿಲೀಸ್ ಮಾಡಿದ್ದು, ಆದ್ರೆ ಈ ಅವಧಿಯಲ್ಲಿ ಸೆಸ್ ಕೇವಲ 95,444 ಕೋಟಿ ರೂ. ಸಂಗ್ರಹವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.

ಇಂದು ನಡೆದ ಸಭೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳು ಹೆಚ್ಚಿನ ಜಿಎಸ್‍ಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದ್ರೆ ಜಿಎಸ್‍ಟಿ ಸಂಗ್ರಹದ ಕೊರತೆ ಹಿನ್ನೆಲೆ ಪರಿಹಾರ ನೀಡುವದರ ಬಗ್ಗೆ ಕೇಂದ್ರ ಸ್ಪಷ್ಟಪಡಿಸಿಲ್ಲ. ಆರ್ಥಿಕ ಕೊರತೆಯನ್ನು ಸರಿದೂಗಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸಾಲ ಪಡೆಯವಂತೆ ಸಲಹೆ ನೀಡಿವೆ ಎನ್ನಲಾಗಿದೆ. ಆದ್ರೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯಗಳಲ್ಲಿ ಉಂಟಾಗಿರುವ ಆದಾಯದ ಕೊರತೆಯನ್ನು ಸರಿದೂಗಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ರಾಜ್ಯಗಳ ಆರ್ಥಿಕ ಕೊರತೆ ನೀಗಿಸುವುದು ಕೇಂದ್ರ ಸರ್ಕಾರ ಶಾಸನಬದ್ಧ ಕರ್ತವ್ಯವಾಗಿದೆ ಎಂದು ಹೇಳಿವೆ. ಸಭೆಯಲ್ಲಿ ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ಮತ್ತು ದೆಹಲಿ ಸರ್ಕಾರಗಳು ಆರ್ಥಿಕ ಕೊರತೆ ನೀಗಿಸವಂತೆ ಒತ್ತಡ ಹೇರಿವೆ.

ಈ ವೇಳೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅಭಿಪ್ರಾಯ ಉಲ್ಲೇಖಿಸಿ ಮಾತನಾಡಿರುವ ಸೀತಾರಾಮನ್, ಜಿಎಸ್‍ಟಿ ಸಂಗ್ರಹದಲ್ಲಿ ಕೊರತೆಯಾದ ಹಿನ್ನೆಲೆ ಕೇಂದ್ರ ತನ್ನ ರಾಜಸ್ವದಿಂದ ರಾಜ್ಯದ ಬೊಕ್ಕಸದ ಕೊರತೆಯನ್ನ ಪೂರೈಸಲು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿರಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *