‘ಕೊರೊನಾ ಖರ್ಚಿನ ಲೆಕ್ಕ ಕೊಡಿ’- ಯುವ ಕಾಂಗ್ರೆಸ್ಸಿನಿಂದ ವಿಭಿನ್ನ ಪ್ರತಿಭಟನೆ

ಶಿವಮೊಗ್ಗ: ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಇಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಮುಖ್ಯ ಅಂಚೆ ಕಚೇರಿ ಮುಂಭಾಗ ಕೊರೊನಾ ಖರ್ಚು-ಲೆಕ್ಕ ಕೊಡಿ ಅಂತ ಅಂಚೆ ಪತ್ರ ಚಳವಳಿ ನಡೆಸಿದ್ದಾರೆ.

ಕೊರೊನಾ ಮಹಾಮಾರಿಯಿಂದ ರಾಜ್ಯದ ಜನ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ನೀಡಬೇಕಾದ ಸರ್ಕಾರ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದೆ ಎಂದು ಆಪಾದಿಸಿದ್ದಾರೆ. ಅಲ್ಲದೆ ರಾಜ್ಯದ ಸಚಿವರುಗಳು ನೀಡುತ್ತಿರುವ ಹೇಳಿಕೆಗಳಲ್ಲಿ ಮೇಲ್ನೋಟಕ್ಕೆ ವ್ಯತ್ಯಾಸ ಕಾಣಿಸುತ್ತಿದ್ದು, ರಾಜ್ಯ ಸರ್ಕಾರ ಈ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

ಕೊರೊನಾ ಸಂದರ್ಭದಲ್ಲಿ ಖರೀದಿ ಮಾಡಿದ ವೈದ್ಯಕೀಯ ಪರಿಕರಗಳಾದ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್, ಕೊರೊನಾ ಸೋಂಕಿತರಿಗಾಗಿ ಬಳಸುವ ಬೆಡ್‍ಗಳು, ಆಹಾರದ ಕಿಟ್ ಹಾಗೂ ಇನ್ನಿತರ ಸರ್ಜಿಕಲ್ ಪರಿಕರಗಳನ್ನು ಮಾರುಕಟ್ಟೆಯ ಬೆಲೆಗಿಂತ ಮೂರು-ನಾಲ್ಕು ಪಟ್ಟು ಹೆಚ್ಚು ಹಣವನ್ನು ಕೊಟ್ಟು ಖರೀದಿಸುತ್ತಿದೆ ಹಾಗೂ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೊಟ್ಟಂತಹ ಆಹಾರದ ಕಿಟ್ ಗಳಿಗೆ ಸರ್ಕಾರ ನಾವೇ ಖರೀದಿಸಿದ್ದೇವೆ ಎಂದು ಸುಳ್ಳು ಲೆಕ್ಕವನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಜೊತೆಗೆ ದಿನನಿತ್ಯ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದರಿಂದ ರಾಜ್ಯದ ಜನರಲ್ಲಿ ಅನುಮಾನ ಮೂಡಿದೆ. ಈ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಶ್ವೇತ ಪತ್ರವನ್ನು ಹೊರಡಿಸಿ ರಾಜ್ಯದ ಜನತೆಗೆ ಕೊರೊನಾದ ಖರ್ಚಿನ ಲೆಕ್ಕವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಪೋಸ್ಟ್ ಬಾಕ್ಸ್ ನಲ್ಲಿ ಅಂಚೆ ಪತ್ರಗಳನ್ನು ಹಾಕುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ಇದನ್ನು ಓದಿ: 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್‌ ಬಂದಿತ್ತಾ -ಕಾಂಗ್ರೆಸ್‌ ಆರೋಪಕ್ಕೆ ಅಶೋಕ್‌ ತಿರುಗೇಟು

Comments

Leave a Reply

Your email address will not be published. Required fields are marked *