‘ಕೊರೊನಾ’ ಎಂದು ಕೂಗಿ ವೈದ್ಯೆಗೆ ಕಿರುಕುಳ- ಅವಾಚ್ಯ ಶಬ್ದಗಳಿಂದ ನಿಂದಿಸಿದ ಸ್ಥಳೀಯರು

ನವದೆಹಲಿ: ಕೋವಿಡ್-19 ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆಯೊಬ್ಬರು ತಮ್ಮ ಮನೆಗೆ ವಾಪಸ್ಸಾದಾಗ ಸ್ಥಳೀಯರು ಅವರನ್ನು ಹಿಗ್ಗಾಮುಗ್ಗ ನಿಂದಿಸಿದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.

ಈ ಘಟನೆ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಡೆದಿದೆ. ಕುಂಜ್ ಪ್ರದೇಶದಲ್ಲಿ ಮಹಿಳೆ ಒಂಟಿಯಾಗಿ ನೆಲೆಸಿದ್ದಾರೆ. ಹೀಗಾಗಿ ಅವರು ಐಸೋಲೇಷನ್ ವಾರ್ಡಿನಿಂದ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಸ್ಥಳೀಯರು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಅವರನ್ನು ಕೂಡಿ ಹಾಕಿದ್ದರು.

ಕೋವಿಡ್-19 ರೋಗಿಗಳ ಸ್ಯಾಂಪಲ್‍ಗಳನ್ನು ಸಂಗ್ರಹಿಸುವಾಗ ವೈದ್ಯರಿಗೂ ಕೊರೊನಾ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯೆಯನ್ನು ಎರಡು ಬಾರಿ ಟೆಸ್ಟ್ ಗೆ ಒಳಪಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ವೈದ್ಯೆ ಬುಧವಾರ ವೈಎಂಸಿಎ ಐಸೋಲೇಷನದ ಕೇಂದ್ರದಿಂದ ಮನೆಗೆ ಬಂದಿದ್ದಾರೆ. ಹೀಗೆ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಅಕ್ಕ-ಪಕ್ಕದ ಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ.

ವೈದ್ಯ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ ಲಿಖಿತ ದೂರಿನಲ್ಲಿ, “ನಾನು ದೆಹಲಿಯ ತಿಸ್ ಹಜಾರ್ ನಲ್ಲಿರುವ ಪೊಲೀಸ್ ಲೈನ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲದೆ ವ್ಯಕ್ತಿಯೊಬ್ಬ ನನ್ನನ್ನೇ ದುರುಗುಟ್ಟಿ ನೋಡುತ್ತಾ ಕೊರೊನಾ ಎಂದು ಕಿರುಚಾಡಲು ಆರಂಭಿಸಿದ್ದ. ಹೀಗಾಗಿ ನಾನು ಈ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ” ತಿಳಿಸಿದ್ದಾರೆ.

“ನಾನು ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಎರಡು ಬಾರಿ ನನ್ನ ಟೆಸ್ಟ್ ಮಾಡಲಾಗಿದೆ. ಈ ವೇಳೆ ನನಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಹೇಳಿಕೊಳ್ಳಲು ಕೂಡ ಸ್ಥಳೀಯರು ಬಿಡದೇ ಬೆದರಿಕೆ ಹಾಕಲು ಶುರು ಮಾಡಿದ್ದರು. ಜೊತೆಗೆ ಕೂಡಿ ಹಾಕಲು ಯತ್ನಿಸಿದ್ದರು ಎಂದು ವೈದ್ಯೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ಕೊನೆಗೆ ವೈದ್ಯೆ ವ್ಯಕ್ತಿ ಜೊತೆ ವಾಗ್ವಾದ ನಡೆಸುವುದನ್ನು ನಿಲ್ಲಿಸಿ ನೇರವಾಗಿ ಸ್ಥಳೀಯ ಕಲ್ಯಾಣ ಸಂಘಕ್ಕೆ ದೂರು ನೀಡಲು ಹೋಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ವೈದ್ಯೆಯ ಮನೆಯನ್ನು ಲಾಕ್ ಮಾಡಿದ್ದರು. ಅಲ್ಲದೆ ನೀನು ಹೇಗೆ ಮನೆಯೊಳಗೆ ಹೋಗುತ್ತಿಯಾ ಅಂತ ನೋಡುತ್ತೇವೆ. ಅದ್ಯಾರ ಜೊತೆ ಬಳಿ ದೂರು ಹೇಳಿಕೊಳ್ಳುತ್ತಿಯೋ ಹೇಳ್ಕೋ. ಸದ್ಯ ನೀನು ಮನೆಯಿಂದ ಹೊರಗಿದ್ದು, ಇನ್ನು ಒಳಗಡೆ ಬರೋಕೆ ಆಗಲ್ಲ. ಅದ್ಯಾರನ್ನು ಕರೀತಿಯೋ ಕರಿ ಎಂದು ಅವಾಜ್ ಹಾಕಿದ್ದಾರೆ. ಈ ವೇಳೆ ವೈದ್ಯೆ ಪೊಲೀಸ್ ಹಾಗೂ ಆಸ್ಪತ್ರೆಯ ಸಿಡಿಎಂಓ ಡಾ. ಬಾಲ ಅವರನ್ನು ಸಹಾಯ ಮಾಡುವಂತೆ ಬೇಡಿಕೊಂಡಿದ್ದಾರೆ.

ಅಲ್ಲದೆ ನೆರೆಹೊರೆಯವರ ಕಾಟವನ್ನು ತನ್ನ ವೈದ್ಯರೊಂದಿಗೆ ತಿಳಿಸಿದ್ದಾರೆ. ಸ್ಥಳೀಯ ನಡತೆ ನನಗೆ ಭಯ ಹುಟ್ಟಿಸಿದೆ. ಈ ಪ್ರದೇಶದಲ್ಲಿ ಮುಂದೆ ನನಗೆ ರಕ್ಷಣೆ ಸಿಗುತ್ತೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಸ್ಟೇಷನ್ ಹೌಸ್ ಆಫೀಸರ್ ಗೆ ಬರೆದ ಪತ್ರದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ವೈದ್ಯೆಗೆ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *