ಕೊರೊನಾ ಆತಂಕದ ನಡುವೆಯೇ ಧಾರಾಕಾರ ಮಳೆ- ಪರದಾಡಿದ ವಾಹನ ಸವಾರರು

ಬೆಂಗಳೂರು: ಕೊರೊನಾ ಆತಂಕದ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ರಾತ್ರಿ ಧಾರಾಕಾರ ಮಳೆಯಾಗಿದೆ.

ಬೆಂಗಳೂರಿನ ಮಡಿವಾಳ ಮುಖ್ಯ ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಮರ ಹೊತ್ತಿ ಉರಿದಿದೆ. ದಾಸರಹಳ್ಳಿ, ಆನೇಕಲ್, ಚಂದಾಪುರ ಹಾಗೂ ಎಲೆಕ್ಟ್ರಾನ್ ಸಿಟಿ, ಅತ್ತಿಬೆಲೆಯಲ್ಲಿ ಭಾರೀ ಮಳೆಯಾಗಿದೆ. ಜಿಟಿಜಿಟಿ ಮಳೆಯಿಂದ ವಾಹನ ಸವಾರರು ಪರದಾಡುವಂತಾಯ್ತು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಮೂಡಿಗೆರೆ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದಲ್ಲಿ ತುಂತುರು ಮಳೆಯಾಗಿದೆ.

ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು ತುಂಗಾ-ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ. ಸಂಜೆಯಿಂದ ರಾತ್ರಿವರೆಗೆ ಕೇವಲ ಎರಡು ಗಂಟೆಯಲ್ಲಿ ಮೂಡಿಗೆರೆ ತಾಲೂಕಿನ ಕೆಲ ಭಾಗ ಏಳು ಇಂಚಿನಷ್ಟು ಮಳೆ ಸುರಿದಿದ್ದು ಮಲೆನಾಡಿಗರು ಮಳೆ ಕಂಡು ಕಂಗಾಲಾಗಿದ್ದು, ಕಳೆದ ವರ್ಷ ಬಂದ ಪರಿಸ್ಥಿತಿ ಈ ವರ್ಷವೂ ಬರುತ್ತಾ ಎಂದು ಮಲೆನಾಡಿನ ಜನ ಆತಂಕಕ್ಕೀಡಾಗಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಮಲೆನಾಡಿನಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿತ್ತು. ಆದ್ರೆ, ನಿನ್ನೆಯಂತಹಾ ಮಳೆ ಎಂದು ಸುರಿದಿರಲಿಲ್ಲ. ಕಳೆದ ವರ್ಷ ಕೂಡ 18 ಗಂಟೆಯಲ್ಲಿ 22 ಇಂಚಿನಷ್ಟು ಮಳೆ ಸುರಿದಿತ್ತು. ಆದ್ರೆ, ಈ ವರ್ಷ ಕಳೆದ ರಾತ್ರಿ ಎರಡೇ ಗಂಟೆಯಲ್ಲಿ ಏಳು ಇಂಚು ಮಳೆ ಸುರಿದಿರೋದು ಮಲೆನಾಡಿಗರನ್ನ ಕಂಗಾಲಾಗಿಸಿದೆ. ಮಲೆನಾಡಿಗರು ಮಲೆನಾಡಿನ ಮೇಲೆ ವರುಣದೇವನಿಗಿರೋ ಕೋಪ ತಣ್ಣಗಾದಂತೆ ಕಾಣುತ್ತಿಲ್ಲ ಎಂದು ಭಾವಿಸಿದ್ದಾರೆ.

ಇತ್ತ ಚಾಮರಾಜನಗರ, ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ರಸ್ತೆಯಲ್ಲೆಲ್ಲಾ ಮಳೆ ನೀರು ಹರಿದಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.

Comments

Leave a Reply

Your email address will not be published. Required fields are marked *