ಕೊರೊನಾ ಅಬ್ಬರ – ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ..?

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರ್ತಿಲ್ಲ. ಅದರಲ್ಲೂ ಇತ್ತೀಚೆಗೆ ಟೆಸ್ಟಿಂಗ್‍ನ್ನೂ ಇಳಿಸಲಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಣೆ ಆಗೋ ಸಾಧ್ಯತೆಗಳಿವೆ.

ರಾಜ್ಯದಲ್ಲಿ 14 ದಿನ ಲಾಕ್‍ಡೌನ್ ತಂದರೂ ಕೊರೊನಾ ಕಂಟ್ರೋಲ್‍ಗೆ ಬರ್ತಿಲ್ಲ. ಟೆಸ್ಟಿಂಗ್ ಇಳಿಸಲಾಗದೇ ಹೊರತು ಕೊರೋನಾ ಮಾತ್ರ ಕಡಿಮೆ ಆಗಿಲ್ಲ. ಪರಿಣಾಮ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮುಂದುವರಿಸೋ ಸಾಧ್ಯತೆಗಳು ದಟ್ಟವಾಗಿದೆ. ಹಾಗಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಿಎಂ ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಹಿರಿಯ ಸಚಿವರ ಜೊತೆ ಚರ್ಚಿಸಿ ಬಳಿಕ ಸಿಎಂ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಭೆಯಲ್ಲಿ ಲಾಕ್‍ಡೌನ್ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಹೇಳಲಿದ್ದಾರೆ.

ಕೊರೊನಾ ಕಡಿಮೆ ಆಗಿಲ್ಲ. ಹಾಗಾಗಿ ಲಾಕ್‍ಡೌನ್ ಎಷ್ಟು ದಿನ ಅನ್ನೋ ಚರ್ಚೆ ಜೋರಾಗಿದೆ. ಮತ್ತೆ 14 ದಿನ ಲಾಕ್‍ಡೌನ್ ಘೋಷಣೆ ಮಾಡೋ ಸಾಧ್ಯತೆಗಳಿವೆ. ತಜ್ಞರ ಸಲಹೆಯಂತೆ ಸಿಎಂ ಲಾಕ್‍ಡೌನ್ ಘೋಷಿಸಲಿದ್ದಾರೆ. ಲಾಕ್‍ಡೌನ್ ಮುಂದುವರಿಕೆಗೆ ಸಂಪುಟದ ಸಚಿವರು ಕೂಡ ಬೆಂಬಲ ಸೂಚಿಸಿದ್ದಾರೆ. ಗೃಹಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಡಿಸಿಎಂ ಲಕ್ಷ್ಮಣ ಸವದಿ ಕೂಡ ಲಾಕ್‍ಡೌನ್ ಮುಂದುವರಿಕೆಯೇ ಸೂಕ್ತ ಎಂದಿದ್ದಾರೆ.

ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಣೆ ಸಾಧ್ಯತೆ ನಡುವೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡೋ ಸಾಧ್ಯತೆ ಇದೆ. 500 ಕೋಟಿ ಮೌಲ್ಯದ ಪ್ಯಾಕೇಜ್‍ನ್ನು ಸಿಎಂ ಯಡಿಯೂರಪ್ಪ ಅನೌನ್ಸ್ ಮಾಡೋ ಸಾಧ್ಯತೆ ಇದೆ. ಈ ಹಿನ್ನೆಲೆ ನಿನ್ನೆ ಸಿಎಂ ಯಡಿಯೂರಪ್ಪ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ರು. ಸಭೆಯಲ್ಲಿ ಪ್ಯಾಕೇಜ್ ಘೋಷಣೆಗೆ ಸಿಎಂ ಮನಸ್ಸು ಮಾಡಿದ್ದು ಇಂದು ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಲಾಕ್‍ಡೌನ್ ವಿಸ್ತರಣೆ ಮಾಡುವ ಕುರಿತು ಸರ್ಕಾರ ಚಿಂತನೆ ಮಾಡಬೇಕು ಅಂತ ಮಾಜಿ ಪ್ರಧಾನಿ ದೇವೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದರ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಸೋಂಕು ನಿಯಂತ್ರಣಕ್ಕೆ ಒಂದು ತಿಂಗಳು ಲಾಕ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಇಂದು ಲಾಕ್‍ಡೌನ್ ಮುಂದುವರಿಕೆ ಬಗ್ಗೆ ಸಿಎಂ ಬಿಎಸ್‍ವೈ ಅಂತಿಮವಾಗಿ ಘೋಷಣೆ ಮಾಡಲಿದ್ದಾರೆ. ಜೊತೆಗೆ ಪ್ಯಾಕೇಜ್ ಬಗ್ಗೆಯೂ ಕುತೂಹಲ ಹೆಚ್ಚಿದೆ.

Comments

Leave a Reply

Your email address will not be published. Required fields are marked *