ಕೊರೊನಾದಿಂದ ಮೃತಪಟ್ಟ ಡಾಕ್ಟರ್ ಕುಟುಂಬಕ್ಕೆ 1 ಕೋಟಿ ರೂ. ಚೆಕ್ ನೀಡಿದ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೊರೊನಾದಿಂದ ಮೃತಪಟ್ಟ ಡಾಕ್ಟರ್ ಜೋಗಿಂದರ್ ಚೌಧರಿ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಮೊತ್ತದ ಚೆಕ್ ನೀಡಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯ ಜೋಗಿಂದರ್ ಚೌಧರಿ ಕೊರೊನಾದಿಂದ ಕಳೆದ ವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಡಾಕ್ಟರ್ ಚೌಧರಿ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಆರ್ಥಿಕ ಸಹಾಯವಾಗಿ ಒಂದು ಕೋಟಿ ರೂ. ಮೊತ್ತದ ಚೆಕ್ ಅನ್ನು ಸೋಮವಾರ ಹಸ್ತಾಂತರಿಸಿದ್ದಾರೆ.

“ನಮ್ಮ ಕೊರೊನಾ ವಾರಿಯರ್ ಡಾ.ಜೋಗಿಂದರ್ ಚೌಧರಿ ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಪ್ರಾಣವನ್ನು ಪಣಕ್ಕಿಟ್ಟು ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸಿದ್ದರು. ಆದರೆ ಕೊರೊನಾ ಸೋಂಕಿನಿಂದಾಗಿ ಡಾ. ಚೌಧರಿ ಇತ್ತೀಚೆಗೆ ನಿಧನರಾಗಿದ್ದಾರೆ. ನಾನು ಅವರ ಕುಟುಂಬದವರನ್ನು ಭೇಟಿಯಾಗಿ 1 ಕೋಟಿ ರೂ. ಆರ್ಥಿಕ ನೆರವು ನೀಡಿದ್ದೇನೆ. ಇದು ಡಾಕ್ಟರ್ ಕುಟುಂಬಕ್ಕೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ” ಎಂದು ಕೇಜ್ರಿವಾಲ್ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಚೆಕ್ ನೀಡುತ್ತಿರುವ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಡಾಕ್ಟರ್ ಚೌಧರಿ ಮಧ್ಯಪ್ರದೇಶದ ಸಿಂಗರೌಲಿಯ ಮೂಲದವರಾಗಿದ್ದು, 2019 ನವೆಂಬರ್‌ನಲ್ಲಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಜೂನ್ 27ರಂದು ಚೌಧರಿ ಅವರಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಮೊದಲಿಗೆ ದೆಹಲಿಯ ಲೋಕ್ ನಾಯಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಂಗಾರಾಮ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚೌಧರಿ ಕುಟುಂಬಸ್ಥರು ಚಿಕಿತ್ಸೆಗಾಗಿ 3.4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.

ಇತ್ತ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯರು ತಮ್ಮ ಅಸೋಸಿಯೇಷನ್ ನಿಂದ ಚಿಕಿತ್ಸೆಗೆ 2.4 ಲಕ್ಷ ರೂ. ಧನ ಸಹಾಯ ಮಾಡಿದ್ದರು. ಚೌಧರಿ ಅವರ ತಂದೆ ರೈತರಾಗಿದ್ದು, ಮಗನ ಚಿಕಿತ್ಸೆಗೆ ನೆರವಾಗುವಂತೆ ಆಸ್ಪತ್ರೆ ಮಂಡಳಿಗೆ ಪತ್ರ ಬರೆದಿದ್ದರು. ಅಂಬೇಡ್ಕರ್ ಆಸ್ಪತ್ರೆ ಸಹ ಚೌಧರಿ ಚಿಕಿತ್ಸಾ ವೆಚ್ಚಕ್ಕೆ ವಿನಾಯ್ತಿ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *