ಕೊನೆಗೂ ವಿಟಿಯು ಪರೀಕ್ಷೆಗಳು ಮುಂದಕ್ಕೆ ಹೋಯ್ತು

ಬೆಂಗಳೂರು: ಪಬ್ಲಿಕ್ ಟಿವಿಯ ಸತತ ವರದಿಯಿಂದ ಕೊನೆಗೂ ಉನ್ನತ ಶಿಕ್ಷಣ ಇಲಾಖೆ ತನ್ನ ನಿರ್ಧಾರವನ್ನು ಬದಲಾಯಿಸಿದೆ. ರಾಜ್ಯಾದ್ಯಂತ ಏಪ್ರಿಲ್ 27ರ ರಾತ್ರಿಯಿಂದ 14 ದಿನ ‘ಕೊರೊನಾ ಕರ್ಫ್ಯೂ’ ಜಾರಿ ಹಿನ್ನಲೆಯಲ್ಲಿ ನಾಳೆಯಿಂದ ನಡೆಯಬೇಕಿದ್ದ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಎಂಜಿನಿಯರಿಂಗ್, ಪಾಲಿಟೆಕ್ನಿಕ್‍ನ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಎರಡನೇ ಅಲೆಯ ನಡುವೆ ನಾಡಿನ ಕ್ಷೇಮಕ್ಕಾಗಿ ಕೊರೊನಾ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದನ್ನು ಕೊರೊನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಈಗಾಗಲೇ 10ನೇ ತರಗತಿಯ ಸಿಬಿಎಸ್‍ಸಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳು ಪರೀಕ್ಷೆಯನ್ನು ಮುಂದೂಡಿದ್ದರೂ ವಿಟಿಯು ಮಾತ್ರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ಅಶ್ವತ್ಥ ನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಬ್ಲಿಕ್ ಟಿವಿ ಸಹ ವಿದ್ಯಾರ್ಥಿಗಳ ಪರವಾಗಿ ವರದಿಯನ್ನು ಪ್ರಸಾರ ಮಾಡಿ ಉನ್ನತ ಶಿಕ್ಷಣ ಇಲಾಖೆಯನ್ನು ಪ್ರಶ್ನೆ ಮಾಡಿತ್ತು.

Comments

Leave a Reply

Your email address will not be published. Required fields are marked *