ಕೊನೆಗೂ ನ್ಯಾಯ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗ್ತಿದೆ: ಜ್ಯೋತಿ ಉದಯ್

ಬೆಂಗಳೂರು: ಕೊನೆಗೂ ನ್ಯಾಯ ಸಿಕ್ಕಿದೆ. ಹೀಗಾಗಿ ನನಗೆ ತುಂಬಾ ಖುಷಿಯಾಗ್ತಿದೆ ಎಂದು ಜ್ಯೋತಿ ಉದಯ್ ತಿಳಿಸಿದ್ದಾರೆ.

2013ರಲ್ಲಿ ಎಟಿಎಂನಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣದ ಅಪರಾಧಿ ಮಧುಕರ್ ರೆಡ್ಡಿಗೆ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜ್ಯೋತಿ, ತುಂಬಾ ಸೀರಿಯಸ್ ಆದ ಶಿಕ್ಷೆ ಅವರಿಗೆ ನೀಡಬೇಕು. ಆದರೆ ಅದರ ತೀರ್ಮಾನವನ್ನು ನ್ಯಾಯಾಲಯವೇ ಮಾಡಬೇಕು ಹೊರತು ನಾವಲ್ಲ. ಮುಂದಿನ ದಿನಗಳಲ್ಲಿ ಅವರು ಬೇರೆ ಯಾರ ಮೇಲೂ ಇಂತಹ ಕೃತ್ಯ ಎಸಗಬಾರದು ಎಂದು ಹೇಳಿದರು.

ಕೃತ್ಯ ಎಸಗಿ ಮಧುಕರ್ ರೆಡ್ಡಿ ಕೆಲ ವರ್ಷ ತಲೆಮರೆಸಿಕೊಂಡಿದ್ದನು. ಈ ವೇಳೆ ನಮಗೆ ತುಂಬಾ ಬೇಜಾರಾಗಿತ್ತು. ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಗಳನ್ನು ನಡೆಸಿದರೂ ಆರೋಪಿ ಸಿಕ್ಕಿರಲಿಲ್ಲ. ಆದರೆ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೂಲಕ ಅವರು ನನಗೆ ಸಹಾಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ-ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

ಏಕಾಏಕಿ ಎಟಿಎಂಗೆ ನುಗ್ಗಿದ ಮಧುಕರ ರೆಡ್ಡಿ ಮೊದಲು ಎಷ್ಟಿದೆ ಅಂತ ಕೇಳಿದ್ರು. ಆಗ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ 2-3 ಸಲ ಎಷ್ಟಿದೆ ಎಷ್ಟಿದೆ ಅಂತ ಕೇಳಿದ್ರು. ಕೊನೆಗೆ ನನ್ನಲ್ಲಿ ಏನೂ ಇಲ್ಲ. ಮಗಳ ಫೀಸ್ ಇಟ್ಟಿದ್ದೇನೆ ಅಷ್ಟೇ ಅಂತ ಹೇಳಿದೆ. ಆ ಬಳಿಕ ನನಗೇನಾಯ್ತು ಗೊತ್ತಿಲ್ಲ. ಯಾಕಂದ್ರೆ ಅವರು ನನ್ನ ಮೂಲೆಗೆ ತಳ್ಳಿದ್ರು. ಈ ವೇಳೆ ನಾನು ಪ್ರಜ್ಞೆ ತಪ್ಪಿದ್ದೇನೆ ಎಂದು ಜ್ಯೋತಿ ವಿವರಿಸಿದರು.

ನಾನು ಬ್ಯಾಂಕಿನಲ್ಲಿ ಕೆಲಸ ಮಾಡುವುದರಿಂದ ಮೊದಲು ಯಾರೋ ಕ್ಯಾಶ್ ಲೋಡಿಂಗ್ ನವರು ಬಂದಿರಬಹುದು ಅಂದುಕೊಂಡೆ. ಅಲ್ಲದೆ ಏನು ಬೇಕು ಅಂತ ಕೇಳಿದೆ. ಅಷ್ಟರಲ್ಲಾಗಲೇ ಎಟಿಎಂ ಶಟರ್ ಎಳೆದರು. ಆವಾಗ ಈ ವ್ಯಕ್ತಿ ದುರುದ್ದೇಶದಿಂದ ಬಂದಿದ್ದಾನೆ ಅಂತ ಗೊತ್ತಾಯ್ತು. ಅಪರಾಧ ಕೃತ್ಯ ಎಸಗಲು ಬಂದಿರುವುದಾಗಿ ನನಗೆ ಮನವರಿಕೆ ಆಯ್ತು. ಆಮೇಲೆ ನನಗೆ ಭಯ ಶುರುವಾಯ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಂದು ಸಹಾಯ ಮಾಡಿದ್ದ ಕಾರ್ಪೋರೇಶನ್ ಬ್ಯಾಂಕ್ ಸಿಬ್ಬಂದಿ, ಎಎನ್ ಸುರೇಶ್, ವಿಠಲ್ ರಾವ್. ರವಿ ಬಾಬು ಇವರೆಲ್ಲರೂ ನನಗೆ ಫುಲ್ ಸಪೋರ್ಟ್ ಮಾಡಿದ್ದರು. ನನ್ನ ಕುಟುಂಬ, ಪತಿ ಉದಯ್ ಕುಮಾರ್ ಹಾಗೂ ಬಿಜಿಎಸ್ ಆಸ್ಪತ್ರೆಯ ಸಿಬ್ಬಂದಿ ತಂಡ ಹಾಗೂ ವೈದ್ಯರಾದ ವೆಂಕಟರಮನ್, ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಕ್ಕೆ ಧನ್ಯವಾದ ತಿಳಿಸಲು ಇಷ್ಟಪಡುವುದಾಗಿ ಈ ವೇಳೆ ತಿಳಿಸಿದರು.

Comments

Leave a Reply

Your email address will not be published. Required fields are marked *