ಕೊಡಗಿನಾದ್ಯಂತ ಹೋಂಸ್ಟೇ ರೆಸಾರ್ಟ್ ಬಂದ್ ಮಾಡಿ- ಜಿಲ್ಲಾಧಿಕಾರಿ ಅದೇಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನಾದ್ಯಂತ ಇಂದಿನಿಂದ ಹೋಂಸ್ಟೇ ರೆಸಾರ್ಟ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಮಾಡಿದ್ದಾರೆ.

ಎರಡು ಸಾವಿರಕ್ಕೂ ಹೆಚ್ಚು ಹೋಂಸ್ಟೇ ರೆಸಾರ್ಟ್‍ಗಳು ಕೊಡಗಿನಲ್ಲಿವೆ. ಲಾಕ್ ಡೌನ್ ತೆರವು ಮಾಡಿದ ಬಳಿಕ ಇತ್ತೀಚೆಗಷ್ಟೇ ಅಂದರೆ ಜೂನ್ 8ರ ಬಳಿಕ ಹೋಂಸ್ಟೇ ರೆಸಾರ್ಟ್ ತೆರೆಯಲಾಗಿತ್ತು. ಬಳಿಕ ಪ್ರವಾಸಿಗರು ಜಿಲ್ಲೆಗೆ ಮತ್ತೆ ಬರಲಾರಂಭಿಸಿದ್ದರು.

ಜೊತೆಗೆ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಈಚೆಗಷ್ಟೇ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ನೂರರ ಗಡಿ ಸಮೀಪಿಸಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೋಂಸ್ಟೇ, ರೆಸಾರ್ಟ್‍ಗಳು ಇಂದಿನಿಂದಲೇ ಬಂದ್ ಮಾಡುವಂತೆ ಆದೇಶ ಮಾಡಿದ್ದಾರೆ.

ಈಗಾಗಲೇ ಹೋಂಸ್ಟೇ ರೆಸಾರ್ಟಿನಲ್ಲಿ ಪ್ರವಾಸಿಗರು ಇದ್ದರೆ, ಅವರ ಬುಕಿಂಗ್ ಅವಧಿ ಮುಗಿಯುತ್ತಿದ್ದಂತೆಯೇ ವಾಪಸ್ ಕಳುಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಹೊಸ ಬುಕಿಂಗ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ನಿಯಮ ಮುಂದಿನ ಆದೇಶದವರೆಗೆ ಅನ್ವಯ ಆಗಲಿದ್ದು, ಉಲ್ಲಂಘನೆ ಆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *