ಕೊಡಗಿನಿಂದ ವಾಪಸ್ ಆಗುತ್ತಿದ್ದಾರೆ ನೂರಾರು ಪ್ರವಾಸಿಗರು

ಮಡಿಕೇರಿ: ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಕೊಡಗು ಜಿಲ್ಲಾಡಳಿತ ಆದೇಶ ಮಾಡಿದೆ.

ಫೆಬ್ರವರಿ 3ರ ಸಂಜೆಯಿಂದಲೇ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದು, ಏಪ್ರಿಲ್ 20 ರವರೆಗೆ ಮುಚ್ಚಲಿವೆ. ಕೊಡಗಿನ ಪ್ರಸಿದ್ದ ಪ್ರವಾಸಿ ತಾಣ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ರಾಜಾಸೀಟ್, ಅಬ್ಬಿಫಾಲ್ಸ್, ದುಬಾರೆ ಅಷ್ಟೇ ಅಲ್ಲ ತಲಕಾವೇರಿ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ.

ಪ್ರವಾಸಿ ತಾಣಗಳನ್ನು ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಸಮಸ್ಯೆಗೆ ಸಿಲುಕುವಂತಾಯಿತು. ಅದರಲ್ಲೂ ರಜಾ ದಿನವಾದ ಭಾನುವಾರವೂ ಮಾಹಿತಿ ಇಲ್ಲದೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬಂದಿದ್ದ ನೂರಾರು ಪ್ರವಾಸಿಗರು ನಿರಾಶರಾಗಬೇಕಾಯಿತು. ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಂದ ಬಂದಿದ್ದ ಪ್ರವಾಸಿಗರು ಪ್ರವಾಸಿ ತಾಣಗಳ ಎಂಟ್ರಿಯಲ್ಲೇ ಬೀಗ ಹಾಕಿರುವುದನ್ನು ನೋಡಿ ವಾಪಸ್ ತೆರಳಿದರು. ಮೊದಲೇ ಮಾಹಿತಿ ನೀಡಿದ್ದರೆ ವೆಚ್ಚ ಮಾಡಿಕೊಂಡು ಕೊಡಗಿಗೆ ಬರುವುದೆಲ್ಲವೂ ತಪ್ಪುತ್ತಿತ್ತು ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಂದೆಡೆ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ವೀಕೆಂಡ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವರೆಂದು ಸಾಕಷ್ಟು ಬಂಡವಾಳ ಹಾಕಿದ್ದು, ಇದ್ದಕ್ಕಿದ್ದಂತೆ ಪ್ರವಾಸಿ ತಾಣಗಳನ್ನು ಬಂದ್ ಮಾಡಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷವೂ ಆರೇಳು ತಿಂಗಳ ಕಾಲ ಲಾಕ್ ಡೌನ್ ಆಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವು. ಈಗ ಮತ್ತೆ ಲಾಕ್‍ಡೌನ್ ಮಾಡಿರುವುದರಿಂದ ತಮ್ಮ ಬದುಕು ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *