ಕೊಡಗಿಗೆ ದಸರಾ ಆನೆಗಳು ವಾಪಸ್ – ಇಳಿಯಲು ಒಲ್ಲೆನೆಂದು ಸೊಂಡಿಲಿನಿಂದ ಲಾರಿ ಹಿಡಿದ ವಿಕ್ರಮ

ಮಡಿಕೇರಿ: ಮೈಸೂರು ದಸರಾಗೆ ಆಗಮಿಸಿದ ಆನೆಗಳು ಈ ಬಾರಿಯೂ ಕಾಡಿಗೆ ಹೋಗಲು ಹಿಂಜರಿದಿದ್ದು, ವಿಕ್ರಮ ಆನೆ ಇಳಿಯಲು ಒಲ್ಲೆ ಎಂದು ಮತ್ತೆ ಲಾರಿಯೆಡೆಗೆ ತಿರುಗಿ ನಿಂತಿದ್ದ. ಬಳಿಕ ಮಾವುತನ ಸೂಚನೆ ನೀಡಿ ಲಾರಿಯಿಂದ ಇಳಿಯುವಂತೆ ಮಾಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕೊಡಗಿನಿಂದ ನಾಲ್ಕು ಆನೆಗಳು ತೆರಳಿದ್ದವು. ಇದೀಗ ಮತ್ತೆ ಕಾಡಿಗೆ ಮರಳಿವೆ. ದಸರಾದಲ್ಲಿ ಭಾಗವಹಿಸಲು 15 ದಿನಗಳ ಹಿಂದೆ ಕೊಡಗಿನ ಆನೆಕಾಡು ಮತ್ತು ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಆನೆಗಳನ್ನು ಮೈಸೂರಿಗೆ ಕರೆದೊಯ್ಯಲಾಗಿತ್ತು. ದಸರಾ ಮುಗಿದ ಹಿನ್ನೆಲೆ ಆನೆಗಳು ಇಂದು ಕೊಡಗಿಗೆ ಮರಳಿದವು.

ಮೈಸೂರಿನಿಂದ ನೇರವಾಗಿ ಕೊಡಗಿನ ದುಬಾರೆ ಸಾಕಾನೆ ಶಿಬಿರ ಮತ್ತು ಕುಶಾಲನಗರ ಸಮೀಪದ ಆನೆ ಕಾಡಿಗೆ ಆನೆಗಳನ್ನು ಲಾರಿಯಲ್ಲಿ ಸಾಗಿಸಲಾಯಿತು. ವಿಕ್ರಮ ಮತ್ತು ಕಾವೇರಿ ಆನೆಯನ್ನು ಆನೆಕಾಡಿನಲ್ಲಿ ಇಳಿಸಲಾಯಿತು. ಆನೆ ರಕ್ಷಣಾ ಲಾರಿಯಲ್ಲಿ ವಿಕ್ರಮ ಆನೆಯನ್ನು ಕರೆತಂದು ಇಳಿಸಲು ಪ್ರಯತ್ನಿಸಿದರೆ, ನಾನು ಇಳಿಯಲು ಒಲ್ಲೇ ಎಂದು ಹಠ ಹಿಡಿದ. ಇಳಿಯುತಿದ್ದ ವಿಕ್ರಮ ಮತ್ತೆ ಲಾರಿಯೆಡೆಗೆ ತಿರುಗಿ ನಿಂತ. ಕೊನೆಗೆ ಮಾವುತ ಸೂಚನೆ ನೀಡಿದ ಬಳಿಕ ಲಾರಿಯಿಂದ ವಿಕ್ರಮ ಇಳಿದಿದ್ದಾನೆ.

ಲಾರಿಯಿಂದ ಇಳಿಯುತ್ತಿದ್ದಂತೆ ವಿಕ್ರಮ ಆನೆ ಮೊದಲು ಮಜಾಬರೋವರೆಗೆ ಮರವೊಂದಕ್ಕೆ ತನ್ನ ಮೈಯನ್ನು ತೀಡಿದ. ಆನೆ ಹಾಗೆ ಮೈ ಉಜ್ಜಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ನೆರದಿದ್ದ ಜನರು ನಕ್ಕು ಸುಸ್ತಾದರು. ಕೊನೆಗೆ ಮಾವುತ ಚಿಕ್ಕದೊಂದು ಕೋಲಿನಿಂದ ಎರಡು ಪೆಟ್ಟು ಕೊಟ್ಟು ಆನೆಯನ್ನು ಅಲ್ಲಿಂದ ಮುಂದೆ ಕಳುಹಿಸಬೇಕಾಯಿತು.

Comments

Leave a Reply

Your email address will not be published. Required fields are marked *